ನ್ಯಾಯಾಲಯದ ಹೊರಗೆ ಪ್ರಕರಣಗಳ ಇತ್ಯರ್ಥ
ಕಾನೂನಿಗೆ ಉನ್ನತಾಧಿಕಾರ ಸಮಿತಿ ಬೆಂಬಲ
ಹೊಸದಿಲ್ಲಿ,ಜೂ.7: ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ರಾಜಿ ಇತ್ಯರ್ಥಗಳಿಗೆ ಶಾಸನಾತ್ಮಕ ಬೆಂಬಲವನ್ನೊದಗಿಸಲು ಕಾನೂನೊಂದನ್ನು ರೂಪಿಸುವ ಸರಕಾರದ ಪ್ರಸ್ತಾವನೆಯನ್ನು ಕಾನೂನು ಸುಧಾರಣೆಗಳನ್ನು ಸೂಚಿಸಲು ನೇಮಕಗೊಂಡಿರುವ ಉನ್ನತಾಧಿಕಾರ ಸಮಿತಿಯು ಬೆಂಬಲಿಸಿದೆ.
ಮಧ್ಯಸ್ಥಿಕೆ ಪ್ರಕ್ರಿಯೆಗೆ ಶಾಸನಾತ್ಮಕ ಬೆಂಬಲವನ್ನು ಒದಗಿಸಲು ಕಾನೂನು ರಚನೆಯ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯವು ನ್ಯಾಯ ಪೂರೈಕೆ ಮತು ಕಾನೂನು ಸುಧಾರಣೆಗಳ ರಾಷ್ಟ್ರೀಯ ಅಭಿಯಾನದ ಸಲಹಾ ಮಂಡಳಿಯ ಮುಂದಿರಿಸಿತ್ತು. ಫೆಬ್ರವರಿಯಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಹೆಚ್ಚಿನ ಸದಸ್ಯರು ಇದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಕಾನೂನು ಸಚಿವರ ಅಧ್ಯಕ್ಷತೆಯ ಮಂಡಳಿಯು ಸಾಮಾನ್ಯವಾಗಿ ವರ್ಷಕ್ಕೆರಡು ಬಾರಿ ಸಭೆ ಸೇರುತ್ತದೆ. ಸರ್ವೋಚ್ಚ ನ್ಯಾಯಾಲಯ, ಬಾರ್ ಕೌನ್ಸಿಲ್,ಕೇಂದ್ರ ಗೃಹ ಮತ್ತು ಕಾನೂನು ಸಚಿವಾಲಯಗಳ ಪ್ರತಿನಿಧಿಗಳು ಮತ್ತು ಅಟಾರ್ನಿ ಜನರಲ್ ಮಂಡಳಿಯ ಸದಸ್ಯರಾಗಿದ್ದಾರೆ.
ಸದ್ಯಕ್ಕೆ ಮಧ್ಯಸ್ಥಿಕೆ ಪ್ರಕ್ರಿಯೆಯು ಹೆಚ್ಚಾಗಿ ವೈವಾಹಿಕ ವಿವಾದಗಳನ್ನು ಬಗೆಹರಿಸುವಲ್ಲಿ ಬಳಕೆಯಾಗುತ್ತಿದೆ ಮತ್ತು ನೂತನ ಕಾನೂನು ಮೊಕದ್ದಮೆಗಳಲ್ಲಿ ಸಿಂಹಪಾಲು ಹೊಂದಿರುವ ಭೂವಿವಾದ ಮತ್ತು ಕೈಗಾರಿಕಾ ವಿವಾದಗಳಂತಹ ಇತರ ಕ್ಷೇತ್ರಗಳಲ್ಲಿಯೂ ಇಂತಹ ರಾಜಿ ಸಂಧಾನಗಳಿಗೆ ಉತ್ತೇಜನ ನೀಡಬಹುದು.