ಜಿಶಾಗೆ ಬುದ್ಧಿವಾದ ಹೇಳಲು ಹೋಗಿದ್ದೆ ಎಂದ ಕೊಲೆ ಆರೋಪಿ
ಬಾಡಿಗೆಮನೆ ಮಾಲಕ, ಏಜೆಂಟ್ ವಿರುದ್ಧ ಕೇಸು ಸಾಧ್ಯತೆ!
ಕೊಚ್ಚಿ, ಜೂನ್ 17: ಪೆರುಂಬಾವೂರಿನ ಕಾನೂನು ವಿದ್ಯಾರ್ಥಿನಿ ಜಿಶಾ ಕೊಲೆ ಆರೋಪಿ ಅಸ್ಸಾಮ್ ನಿವಾಸಿ ಆಮಿರುಲ್ ಇಸ್ಲಾಮ್ ಸಾಕ್ಷ್ಯದ ಕುರಿತು ಮಾಹಿತಿಗಳು ಸೋರಿಕೆಯಾಗಿದ್ದು, ಜಿಶಾಗೆ ಉಪದೇಶಿಸಲು ಹೋಗಿದ್ದೆ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಆದರೆ ಪೊಲೀಸರು ಆತನು ಮಾತನ್ನು ನಂಬಿಲಿಲ್ಲ. ಕೊಲೆಗೆ ಈತನಿಗೆ ಸಹಕರಿಸಿದ ಇನ್ನೊಬ್ಬ ಇದೀಗ ನಾಪತ್ತೆಯಾಗಿದ್ದು ಆತನಿಂದ ಕೊಲೆಯ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ ಎಂದು ಪೊಲೀಸರು ಭಾವಿಸಿದ್ದಾರೆ.
ಈತನ ಇನ್ನೊಬ್ಬ ಸಂಗಡಿಗನನ್ನು ಪೊಲೀಸರು ಹುಡುಕುತ್ತಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಆತನಿಂದ ಲಭ್ಯವಾಗುವ ವಿಶ್ವಾಸ ಪೊಲೀಸರಿಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಿರ್ಣಾಯಕ ವಿವರಗಳು ಈತನಿಂದ ಬಹಿರಂಗಗೊಳ್ಳಬಹುದು. ಈ ನಡುವೆ ಜಿಶಾ ಕೊಲೆಕೇಸು ತನಿಖೆಗೆ ಸಹಕರಿಸದ ಬಾಡಿಗೆ ಮನೆಯ ಮಾಲಕ ಹಾಗೂ ಕಾರ್ಮಿಕರನ್ನು ಒದಗಿಸಿದ ಏಜೆಂಟ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಳ್ಳಲಿದ್ದಾರೆ. ಆಮಿರುಲ್ ಇಸ್ಲಾಮ್ ಕಾಣೆಯಾಗಿದ್ದನ್ನು ಈ ಬಾಡಿಗೆ ಮನೆ ಮಾಲಕ ತನಿಖೆ ವೇಳೆ ಪೊಲೀಸರಿಗೆ ತಿಳಿಸಿರಲಿಲ್ಲ. ಏಜೆಂಟ್ ಮತ್ತು ಬಾಡಿಗೆ ಮನೆ ನೀಡಿದಾತ ಗುಟ್ಟಾಗಿ ಇಟ್ಟಿದ್ದರು. ಬಂಧಿಸಿದ ಆರೋಪಿಯನ್ನು ಇಂದು ಸಂಜೆ ಕೋರ್ಟ್ಗೆ ಹಾಜರು ಪಡಿಸಲಾಗುವುದು, ಹದಿನೈದು ದಿವಸ ಕಸ್ಟಡಿಗೆ ಪಡೆಯಲು ಪೊಲೀಸರು ವಿನಂತಿಸಿಕೊಳ್ಳಲಿದ್ದಾರೆ.