9 ಹಿರಿಯ ಆದಾಯ ತೆರಿಗೆ ಅಧಿಕಾರಿಗಳು ಸಿಬಿಐ ಬಲೆಯಲ್ಲಿ
ಹೊಸದಿಲ್ಲಿ,ಜೂ.22: ಬುಧವಾರ ದೇಶವ್ಯಾಪಿ ಕಾರ್ಯಾಚರಣೆಯೊಂದರಲ್ಲಿ ಸಿಬಿಐ ಭ್ರಷ್ಟಾಚಾರದಲ್ಲಿ ತೊಡಗಿದ್ದ ಆರೋಪದಲ್ಲಿ ದಿಲ್ಲಿಯ ಪ್ರಧಾನ ಆದಾಯ ತೆರಿಗೆ ಆಯುಕ್ತ ಎಸ್.ಕೆ.ಮಿತ್ತಲ್ ಸೇರಿದಂತೆ ಒಂಬತ್ತು ಹಿರಿಯ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಮೂವರು ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ.
ದಿಲ್ಲಿ,ಮುಂಬೈ,ಬೆಂಗಳೂರು,ಚೆನ್ನೈ,ಹೈದರಾಬಾದ್ ಮತ್ತು ಖಮ್ಮಾಮ್ಗಳಲ್ಲಿ 17 ಕಡೆ ಸಿಬಿಐ ಶೋಧ ಕಾರ್ಯಾಚರಣೆಗಳನ್ನು ನಡೆಸಿತು.
ಮಿತ್ತಲ್ ಜೊತೆ ಬೆಂಗಳೂರಿನ ಹೆಚ್ಚುವರಿ ಆಯುಕ್ತ(ವಿನಾಯಿತಿ) ಟಿ.ಎನ್.ಪ್ರಕಾಶ, ಚೆನ್ನೈನ ಉಪ ಆಯುಕ್ತ(ತನಿಖೆ) ಎಸ್.ಮುರಳಿಮೋಹನ, ಚೆನ್ನೈನ ಆಯುಕ್ತೆ(ಆಡಿಟ್-2) ವಿಜಯಲಕ್ಮೀ, ಮುಂಬೈನ ಹೆಚ್ಚುವರಿ ಆಯುಕ್ತ ಎಸ್.ಪಾಂಡಿಯನ್, ಮುಂಬೈನ ಐಟಿಎಟಿ ಆಯುಕ್ತ(ಡಿಆರ್) ಜಿ.ಲಕ್ಮೀವರ ಪ್ರಸಾದ, ಗಾಜಿಯಾಬಾದ್ನ ಹೆಚ್ಚುವರಿ ಮಹಾ ನಿರ್ದೇಶಕ(ಸಿಸ್ಟಮ್ಸ್-4) ವಿಕ್ರಂ ಗೌರ್ ಮತ್ತು ಮುಂಬೈನ ಹೆಚ್ಚುವರಿ ನಿರ್ದೇಶಕ(ತನಿಖೆ) ರಾಜೇಂದ್ರ ಕುಮಾರ ಅವರು ಸಿಬಿಐ ಬಲೆಗೆ ಬಿದ್ದಿರುವ ಅಧಿಕಾರಿಗಳಾಗಿದ್ದಾರೆ.
ಲೆಕ್ಕ ಪರಿಶೋಧಕ ಸಂಜಯ ಭಂಡಾರಿ,ಅವರ ಪುತ್ರರಾದ ಶ್ರೇಯಾಂಶ ಮತ್ತು ದಿವ್ಯಾಂಗ್ ಅವರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.
ಭಂಡಾರಿ ಮತ್ತು ಅವರ ಪುತ್ರರಿಂದ ಪುಕ್ಕಟೆಯಾಗಿ ವಸತಿ,ಪ್ರಯಾಣ,ವಿಮಾನ ಯಾನ ಸೇರಿದಂತೆ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದ ಈ ಅಧಿಕಾರಿಗಳು ಪ್ರತಿಯಾಗಿ ಅವರ ಕಕ್ಷಿದಾರರ ಪ್ರಕರಣಗಳಲ್ಲಿ ನೆರವಾಗುತ್ತಿದ್ದರು ಎಂದು ಆರೋಪಿಸಲಾಗಿದೆ.