ಕಣ್ಣಿನ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ಸಲ್ಲದು: ಡಾ.ಶಾಂತರಾಜ್
ಪುತ್ತೂರು, ಜೂ.22: ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ. ಕಣ್ಣಿಗೆ ಸಮಸ್ಯೆಗಳಾದಾಗ ಹಳ್ಳಿ ಮದ್ದು ಮಾಡುವುದಾಗಲೀ ನಾಟಿ ವೈದ್ಯರನ್ನು ಸಮೀಪಿಸುವ ಬದಲು ತಜ್ಞ ವೈದ್ಯರಿಂದ ಸಲಹೆ ಪಡೆದುಕೊಳ್ಳಬೇಕು ವಿಶೇಷ ನೇತ್ರ ತಜ್ಞ ಡಾ.ಶಾಂತರಾಜ್ ಹೇಳಿದರು.
ಅವರು ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಯುವ, ಸರಕಾರಿ ಪ್ರೌಢ ಶಾಲೆ ಕಲ್ಪಣೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡೂರು, ಗ್ರಾಮ ಪಂಚಾಯತ್ ಮುಂಡೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ ಇದರ ಸಹಭಾಗಿತ್ವದಲ್ಲಿ ಸರ್ವೆ, ಕಲ್ಪಣೆ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲೆಯ ಸಿಲ್ವರ್ ಜುಬಿಲಿ ಪ್ರಯುಕ್ತ ಬುಧವಾರ ಏರ್ಪಡಿಸಲಾಗಿದ್ದ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರದಲ್ಲಿ ಮಾತನಾಡಿದರು.
ಕಣ್ಣಿನ ದೃಷ್ಟಿಯು ಮನುಷ್ಯನಿಗೆ ಅತ್ಯಂತ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಕಣ್ಣಿಗೆ ಸಂಬಂಧಪಟ್ಟ ದೋಷಗಳನ್ನು ನಿವಾರಿಸಲು ತಜ್ಞ ವೈದ್ಯರ ಸಲಹೆಯನ್ನು ಪಡೆಯಬೇಕು, ಇದಕ್ಕೆ ಹಳ್ಳಿ ಮದ್ದು ಮಾಡಿರುವುದರಿಂದಾಗಿ ಈಗಾಗಲೇ ಹಲವರಿಗೆ ತೊಂದರೆಯುಂಟಾಗಿದೆ ಎಂದು ಅವರು ಹೇಳಿದರು.
ವೈದ್ಯೆ ಗೌರಿ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಲ್ಪಣೆ ಪ್ರೌಢ ಶಾಲೆಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಯುವ ಅಧ್ಯಕ್ಷ ರತ್ನಾಕರ್ ರೈ, ಡಾ. ಟಿನೋಯ್, ಡಾ.ಕ್ರಿಸ್ಟಿನಾ, ಡಾ.ಸವಿತಾ ಕುಲಕರ್ಣಿ, ರೋಟರಿ ಕ್ಲಬ್ನ ನರಸಿಂಹ, ಶಿಕ್ಷಕಿ ಅನ್ನಪೂರ್ಣ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕರಾದ ಅನ್ನಪೂರ್ಣ ಸ್ವಾಗತಿಸಿದರು. ಸೋಮಶೇಖರಪ್ಪ ವಂದಿಸಿದರು. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.
187 ಮಂದಿಗೆ ಉಚಿತ ಕಣ್ಣಿನ ಪರೀಕ್ಷೆ:
ಶಿಬಿರದಲ್ಲಿ ಒಟ್ಟು 187 ಮಂದಿ ಉಚಿತ ಕಣ್ಣಿನ ಪರೀಕ್ಷೆಗೆ ಒಳಪಟ್ಟರು. ಇದರಲ್ಲಿ 93 ಮಂದಿಗೆ ತಮ್ಮ ಕಣ್ಣಿನ ದೋಷಕ್ಕೆ ಸಂಬಂಧಪಟ್ಟಂತೆ ಸ್ಥಳದಲ್ಲೇ ಆನಂದಾಶ್ರಮದ ವತಿಯಿಂದ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಉಳಿದ ಮಂದಿಗೆ ತಮ್ಮ ದೃಷ್ಟಿ ದೋಷಕ್ಕೆ ಸಂಬಂಧಪಟ್ಟಂತೆ ನೇತ್ರತಜ್ಞರು ಹೇಳಿದ ವೈದ್ಯರನ್ನು ಭೇಟಿಯಾಗಲು ಸೂಚಿಸಲಾಯಿತು.