ಹೊಸ ಶಿಕ್ಷಣ ನೀತಿ-ಏಕೀ ರಹಸ್ಯ?
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 69 ವರ್ಷಗಳೇ ಕಳೆದಿವೆ. ಆರೂವರೆ ದಶಕಗಳಿಗೂ ಮಿಕ್ಕ ಈ ಸುದೀರ್ಘ ಅವಧಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ದೇಶದಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಶಿಕ್ಷಣ ಒಂದು ದೊಡ್ಡ ವ್ಯಾಪಾರೋದ್ಯಮವಾಗಿ ಬೆಳೆದಿದೆ. ಆದರೆ ದೇಶದಲ್ಲಿ ನಿರ್ದಿಷ್ಟ ಶಿಕ್ಷಣ ನೀತಿಯೊಂದಿದೆಯೇ ಎಂದು ಕೇಳಿದರೆ ಯಾರಿಂದಲೂ ಖಚಿತ ಉತ್ತರ ದೊರಯಲಾರದು. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖಪಾತ್ರ ವಹಿಸಬೇಕಾದ, ಸಚ್ಚಾರಿತ್ರ್ಯ ರೂಪಿಸಬೇಕಾದ, ಸೃಜನಶೀಲತೆ, ಸಂಶೋಧನೆ ಗಳ ಪರಿಸರವನ್ನು ಸೃಷ್ಟಿಸಬೇಕಾದ, ನಮ್ಮ ಬಹುತ್ವ ಸಂಸ್ಕೃತಿಯ ಪರಂಪರೆಯನ್ನು ಉಜ್ವಲಗೊಳಿಸಬೇಕಾದ ಶಿಕ್ಷಣಕ್ಕೆ ಮೊದಲಿನಿಂದಲೂ ಕೊನೆಯ ಆದ್ಯತೆ.
ಸಚಿವ ಸಂಪುಟ ರಚನೆಯಾಗಿ ಖಾತೆಗಳನ್ನು ಹಂಚುವಾಗ ಶಿಕ್ಷಣ ಇಲಾಖೆಯನ್ನು ಒತ್ತಾಯದಿಂದ ಯಾರ ಕೊರಳಿಗಾದರೂ ಕಟ್ಟುತ್ತಿದ್ದುದು ಮೊನ್ನ್ನೆಮೊನ್ನೆಯ ವರೆಗೆ ಇದ್ದ ಪರಿಸ್ಥಿತಿ. ಈಗಲೂ ಪ್ರಾಥಮಿಕ/ಮಾಧ್ಯಮಿಕ ಶಿಕ್ಷಣ ನಮ್ಮ ರಾಜಕೀಯ ನಾಯಕರಲ್ಲಿ ಉತ್ಸಾಹ ಹುಟ್ಟಿಸುವ ಖಾತೆಯೇನಲ್ಲ. ಉನ್ನತ ಶಿಕ್ಷಣವಾದರೆ ಇರಲಿ ಎಂದು ಉತ್ಸಾಹದಿಂದ ಮುಂದೆ ಬರುವವರು ಇದ್ದಾರೆ. ಇದಕ್ಕೆ ಕಾರಣ ಹೇಳಬೇಕಿಲ್ಲ. ಆಯವ್ಯಯದಲ್ಲೂ ಶಿಕ್ಷಣಕ್ಕೆ ಸಿಂಹಪಾಲಿಲ್ಲ. ಆದರೆ ಶಿಕ್ಷಣಕ್ಕೊಂದು ರಾಷ್ಟ್ರೀಯ ನೀತಿ ಬೇಕೆಂಬ -ಅನಿಸಿಕೆ-ಆಸಕ್ತಿಯಂತೂ ಮೊದಲಿನಿಂದ ಇದೆ. ಈ ಅನಿಸಿಕೆ-ಆಸಕ್ತಿಗಳು ಸಮಿತಿ ನೇಮಕ, ಚರ್ಚೆಗಳಲ್ಲೇ ಪರ್ಯಾವಸಾನಗೊಳ್ಳುತ್ತಿದ್ದವು. ಕೇಂದ್ರದಲ್ಲಿ ಎರಡು ವರ್ಷಗಳ ಹಿಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಆರೆಸ್ಸೆಸ್ ಒತ್ತಡದ ಫಲವಾಗಿ ಇದಕ್ಕೆ ಮತ್ತೆ ಜೀವ ಬಂತು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯವರು ಕೇಂದ್ರ ಸಂಪುಟದ ಮಾಜಿ ಕಾರ್ಯದರ್ಶಿ ಟಿ.ಎಸ್.ಆರ್. ಸುಬ್ರಮಣಿಯನ್ ಅಧ್ಯಕ್ಷತೆಯಲ್ಲಿ ಸಮಿತಿ ಯೊಂದನ್ನು ನೇಮಿಸಿದರು. ಸಮಿತಿ ಮೇ 27ರಂದು ಸರಕಾರಕ್ಕೆ ವರದಿ ಸಲ್ಲಿಸಿದೆಯಾದರೂ ಅದನ್ನು ಸಾರ್ವಜನಿಕ ಅವಗಾಹನೆಗೆ ಇನ್ನೂ ಬಹಿರಂಗ ಪಡಿಸಿಲ್ಲ. ಸಮಿತಿಯ ವರದಿ ಯಾರೊಬ್ಬರನ್ನೂ ವೈಭವೀಕರಿಸುವ ಉದ್ದೇಶದಿಂದ ಕೂಡಿಲ್ಲ, ಅದನ್ನು ಸಾರ್ವಜನಿಕರ ಅವಗಾಹನೆಗೆ ತರಬೇಕೆಂಬುದು ಸಮಿತಿಯ ಅಧ್ಯಕ್ಷರ ಆಗ್ರಹ. ಇದಕ್ಕೆ ಸಚಿವೆ ತಣ್ಣೀರೆರಚುವ ಪ್ರತಿಕ್ರಿಯೆ ತೋರಿದ್ದಾರೆ. ಏತನ್ಮಧ್ಯೆ, ಅನಧಿಕೃತ ಮೂಲಗಳಿಂದ ವರದಿ ಸುದ್ದಿ ಮಾಧ್ಯಮಗಳನ್ನು ತಲುಪಿದೆ. ಇನ್ನೂರ ಹದಿನೇಳು ಪುಟಗಳ ಈ ವರದಿಯಲ್ಲಿ ಏನಿರಬಹುದು?
ಎನ್ಡಿಎ ಸರಕಾರ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ತರಲುದ್ದೇಶಿಸಿರುವ ಮೂಲಭೂತ ಬದಲಾವಣೆಗಳ ಸ್ಪಷ್ಟ ನೋಟವನ್ನು ಈ ವರದಿಯಲ್ಲಿ ಕಾಣಬಹುದಾಗಿದೆ ಎನ್ನುತ್ತಾರೆ ಸಮಿತಿಯ ಶಿಪಾರಸುಗಳನ್ನು ಸೂಕ್ಷ್ಮಾತಿಸೂಕ್ಷ್ಮ ವಾಗಿ ಅಧ್ಯಯನಮಾಡಿರುವ ತಜ್ಞರು. ಭಾರತೀಯ ಜನತಾ ಪಕ್ಷದ ಪರವಾಗಿ ತುಂಬ ಜತನದಿಂದ ವರದಿ ಸಿದ್ಧಪಡಿಸಿರುವ ಐವರು ಸದಸ್ಯರನ್ನೊಳಗೊಂಡ ಸಮಿತಿ ಆರೆಸ್ಸೆಸ್ ಮತ್ತು ಅದರ ಪರಿವಾರದ ಮುಖ್ಯ ಬೇಡಿಕೆಗಳನ್ನು ಅನುಮೋದಿಸಿದೆಯೆನ್ನಲಾಗಿದೆ.
ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಣ ಹಕ್ಕು ಕಾಯಿದೆಯನ್ವಯ ಆರ್ಥಿಕ ದುರ್ಬಲವರ್ಗಗಳಿಗೆ ನೀಡಲಾಗಿರುವ ಶೇ.25ರಷ್ಟು ಮೀಸಲಾತಿಯಲ್ಲಿ ವಿನಾಯಿತಿ ತೋರಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸಮಿತಿ ಆಮೂಲಾಗ್ರವಾಗಿ ಪರಿಶೀಲಿಸಿ, ಆರ್ಥಿಕವಾಗಿ ಹಿಂದುಳಿದಿರುವವರ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ನಡುವೆ ಹೊಂದಾಣಿಕೆ ಅಗತ್ಯವೆಂದು ಅಭಿಪ್ರಾಯಪಟ್ಟಿದೆಯೆನ್ನಲಾಗಿದೆ. ವಿಶೇಷವಾಗಿ, ಸಂವಿಧಾನದ 30(1)ವಿಧಿಯನ್ವಯ ನೆರವು ಪಡೆಯುತ್ತಿರುವ ಅಥವಾ ಪಡೆಯದಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಹಕ್ಕುಗಳನ್ನು ಮಾನ್ಯ ಮಾಡಬೇಕೆಂದು ಅಲ್ಪಸಂಖ್ಯಾತರು ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ, ಈ ಒತ್ತಡದಿಂದ ತಪ್ಪಿಸಿಕೊಳ್ಳಲು ಇಂಥದೊಂದು ಹೊಂದಾಣಿಕೆ ಅಗತ್ಯವೆಂಬುದು ಸಮಿತಿಯ ಶಿಫಾರಸಿನ ಮುಖ್ಯಾಂಶ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಹಾಯಮಾಡುವುದಷ್ಟೇ ಅಲ್ಲದೆ, ಸಂವಿಧಾನದಲ್ಲಿ ನಿರ್ದೇಶಿಸಲಾಗಿರುವ ಆಶಯ ಮತ್ತು ನೈಜಮಾನದಂಡಗಳಿಗೆ ಅನುಗುಣವಾಗಿ ನಡೆದು ಕೊಳ್ಳುವುದರತ್ತ ಹೆಚ್ಚು ಗಮನ ಹರಿಸಬೇಕಾಗಿದೆ ಎನ್ನುವುದನ್ನು ಸಮಿತಿ ಪ್ರಧಾನವಾಗಿ ಹೇಳಿದೆ. ಸಮುದಾಯದ ಗಣನೀಯ ಅಗತ್ಯಗಳನ್ನು ಈಡೇ ರಿಸುವುದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮುಖ್ಯ ಉದ್ದೇಶ. ಈ ಸಂವಿಧಾನಾತ್ಮಕ ಹಕ್ಕನ್ನು ಒಟ್ಟಾರೆ ಸಾರ್ವಜನಿಕ ಹಿತ ಮತ್ತು ರಾಷ್ಟ್ರೀಯ ಹಂಗುಹೊಣೆಗಾರಿಕೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಕುಟಿಲೋಪಾಯಮಾರ್ಗಗಳಿಂದ ಬಳಸಿಕೊಳ್ಳದಂತೆ ಸರಕಾರ ಖಾತ್ರಿಪಡಿಸಬೇಕಾಗಿದೆ ಎಂದು ಸಮಿತಿ ಒತ್ತಿಹೇಳಿದೆ.
ಮುಸ್ಲಿಮ್ ಸಮುದಾಯದಲ್ಲಿ ಪ್ರೌಢಶಾಲೆ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪಡೆದವರ ಪ್ರಮಾಣ ಕಡಿಮೆ. ಅಷ್ಟೇಕೆ ಸಾಕ್ಷರತೆ ಪ್ರಮಾಣವೂ ಉಳಿದ ಸಮುದಾಯಗಳಿಗೆ ಹೋಲಿಸಿದರೆ ತುಂಬ ಕಡಿಮೆ ಇದ್ದು ಈ ವಿಷಯದಲ್ಲಿ ಸಮಿತಿ ವೌನ ತಾಳಿರುವುದು ಪ್ರಶ್ನಾರ್ಹವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗುವಂಥ ನೀತಿಯ ಅಗತ್ಯತೆ ಕುರಿತು ಸಮಿತಿ ಕಾಳಜಿ ತೋರಿಲ್ಲ. ಪ್ರಮುಖ ಶಿಫಾರಸುಗಳೇನನ್ನೂ ಮಾಡಿಲ್ಲ. ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸಮಾನ ಅವಕಾಶಗಳು, ಸಾಮಾಜಿಕ ಗಮ್ಯತೆ-ಗ್ರಾಹ್ಯತೆ, ಸಮಾನತೆ ಕಲ್ಪಿಸಬೇಕಾದಂಥ ವಿಷಯಗಳು ಸಂಕೀರ್ಣವೂ ಜಟಿಲವೂ ಆಗಿದ್ದು ಈ ಸಮಸ್ಯೆಗೆ ಭಾಗಶ: ಪರಿಹಾರ ಮಾತ್ರ ದೊರೆತಿದೆ ಎಂದು ಸಮಿತಿ ತಿಪ್ಪೆ ಸಾರಿಸಿದೆ. ಅಲ್ಪಸಂಖ್ಯಾತರ ಶಿಕ್ಷಣ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಂಥ ನಿಲುವು ತಾಳಿರುವ ಸಮಿತಿ ಗುಡ್ಡಗಾಡು ಬುಡಕಟ್ಟುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡಬೇಕಾದ ಅಗತ್ಯದ ಬಗ್ಗೆ ವಿಶೇಷ ಮಹತ್ವ ನೀಡಿದೆ. ಈಶಾನ್ಯ ರಾಜ್ಯಗಳು, ಚತ್ತೀಸ್ಗಡ, ಒಡಿಶಾ, ಗುಜರಾತ್, ಜಾರ್ಖಂಡ್, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಗುಡ್ಡಗಾಡು ಜನರನ್ನು ಶಿಕ್ಷಣದತ್ತ ಸೆಳೆಯಲು, ಅವರಿಗೆ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಸಮಿತಿ ಶಿಫಾರಸು ಮಾಡಿರುವುದು ಚಿಂತನಾರ್ಹ ಅಂಶವಾಗಿದೆ. ಈಚಿನ ದಿನಮಾನದಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಕುರಿತು ನಡೆಯುತ್ತಿರುವ ಚರ್ಚೆ, ಸಂವಾದಗಳ ಹಿನ್ನೆಲೆ ಯಲ್ಲಿ, ಸಮಿತಿ, ಶಿಕ್ಷಣದ ಎಲ್ಲ ಹಂತಗಳಲ್ಲೂ ವೌಲ್ಯಗಳ ಬೋಧನೆ ಇರಬೇಕೆನ್ನುವ ಪ್ರತಿಪಾದನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಶೋಷಣೆ ಮತ್ತು ಅಸಹಿಷ್ಣುತೆಗಳ ಫಲ-ಪರಿಣಾಮಗಳು ಹೆಚ್ಚುಹೆಚ್ಚಾಗಿ ಕಂಡುಬರುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ವೌಲ್ಯಗಳ ಬೋಧನೆ, ವೌಲ್ಯಾಧಾರಿತ ಶಿಕ್ಷಣ ತುಂಬ ಸುಸಂಗತವೆನಿಸುತ್ತದೆ. ಶಿಕ್ಷಣ, ಭಾರತದ ಬಗ್ಗೆ ಹೆಮ್ಮೆಯನ್ನು ಬೆಳೆಸಬೇಕು, ಭಾರತೀಯರಾಗಿರುವ ಬಗ್ಗೆ ಹೆಮ್ಮೆ ಹುಟ್ಟಿಸಬೇಕು ಎಂದು ಸಮಿತಿ ಸ್ಪಷ್ಟವಾಗಿ ಹೇಳಿರುವುದು ವಿಶೇಷವಾಗಿ ಗಮನಿಸಬೇಕಾದ ಮತ್ತೊಂದು ವಿಚಾರವಾಗಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನೂ ಮಾರ್ಗೋಪಾಯಗಳನ್ನೂ ಸಮಿತಿ ಸೂಚಿಸಿದೆ. ಪ್ರತಿಹಂತದಲ್ಲೂ ಸಾಮಾನ್ಯ ಶಿಕ್ಷಣದ ವ್ಯಾಪ್ತಿಯಲ್ಲಿ ವೌಲ್ಯಗಳ ಬೋಧನೆಯನ್ನು ಪ್ರಜ್ಞಾಪೂರ್ವಕವಾಗಿ ಸೇರಿಸತಕ್ಕದ್ದು. ವಯಸ್ಕರ ಶಿಕ್ಷಣ, ಉಪಾಧ್ಯಾಯರ ತರಬೇತಿ, ತಾಂತ್ರಿಕ ಹಾಗೂ ಆಡಳಿತ ನಿರ್ವಹಣಾ (ಮ್ಯಾನೇಜ್ಮೆಂಟ್) ಶಿಕ್ಷಣದಲ್ಲೂ ವೌಲ್ಯಗಳ ಬೋಧನೆಯನ್ನೊಳಗೊಂಡ ಪಠ್ಯಕ್ರಮವಿರಬೇಕೆಂದು ಸಮಿತಿ ಸಲಹೆಮಾಡಿದೆ.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವನ್ನು ರದ್ದುಗೊಳಿಸಬೇಕೆಂದು ಸಮಿತಿ ಶಿಫಾರಸುಮಾಡಿದೆ.ಆದರೆ ಇದಕ್ಕೆ ಬದಲಿಯಗಿ ಮತ್ತೊಂದು ವ್ಯವಸ್ಥೆಯನ್ನೂ ಸೂಚಿಸಿದಂತಿಲ್ಲ. ವಿಶ್ವವಿದ್ಯಾನಿಲಯಗಳಿಗೆ ಧನಸಹಾಯ ನಿಂತರೆ ಅಲ್ಲಿನ ಉನ್ನತ ಶಿಕ್ಷಣ, ಸಂಶೋಧನೆ ಮೊದಲಾದವುಗಳ ಗತಿ ಏನು? ಪರ್ಯಾಯ ಮಾರ್ಗಗಳೇನು? ಈ ಬಗ್ಗೆ ಸಮಿತಿ ಸಲಹೆ-ಶಿಫಾರಸುಗಳೇನನ್ನೂ ಮಾಡಿದಂತಿಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ರಾಷ್ಟ್ರೀಯ ಫೆಲೋಶಿಪ್ ನಿಧಿ ಸ್ಥಾಪನೆ, ಸಮಿತಿ ಮಾಡಿರುವ ಮತ್ತೊಂದು ಮಹತ್ವದ ಶಿಫಾರಸು. ಈ ನಿಧಿಯಿಂದ ಇಂಥ ಹತ್ತು ಲಕ್ಷ ವಿದ್ಯಾರ್ಥಿಗಳಗೆ ಉನ್ನತ ಶಿಕ್ಷಣ ಮುಂದುವರಿಸಲು ಫೆಲೋಶಿಪ್ ನೀಡಬೇಕು ಎಂದೂ ಸಮಿತಿ ಸಲಹೆ ಮಾಡಿದೆ. ಈ ಫೆಲೊಶಿಪ್ನಲ್ಲಿ ಆರ್ಥಿಕವಾಗಿ ದುರ್ಬಲ ರಾಗಿರುವ, ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳ ಬೋಧನಾ ಶುಲ್ಕ, ಕಲಿಕೆ ಸಾಮಗ್ರಿಗಳ ವೆಚ್ಚ ಮತ್ತು ಜೀವನ ನಿರ್ವಹಣಾ ವೆಚ್ಚಗಳನ್ನು ಭರಿಸಬೇಕು. ಇದರಿಂದಾಗಿ ಈ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶಗಳನ್ನು ಹೆಚ್ಚಿಸಿದಂತಾಗುತ್ತದೆ ಹಾಗೂ ಪ್ರತಿಭೆೆ, ಅರ್ಹತೆಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎನ್ನುವುದು ಸಮಿತಿಯ ಮಹದಾಶಯವಿದ್ದಂತಿದೆ.
ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ, ಸಂಶೋಧನೆಗಳತ್ತ ಆಕರ್ಷಿಸಲು ಸರಕಾರ ಏನು ಮಾಡಬೇಕು? ಇದಕ್ಕಾಗಿ ಹೊಸ ಶಿಕ್ಷಣ ನೀತಿಯಲ್ಲಿ ಯಾವ ಕಾರ್ಯವಿಧಾನ, ಕಾರ್ಯತಂತ್ರ ಅಳವಡಿಸಬೇಕು, ಅನುಸರಿಸಬೇಕು ಎನ್ನುವುದರತ್ತ ಸಮಿತಿ ಹೆಚ್ಚಿನ ಚಿಂತನಮಂಥನ ನಡೆಸಿದಂತೆ ಕಾಣುವುದಿಲ್ಲ. ಶಾಲೆಗಳಲ್ಲಿ ಸಂಸ್ಕೃತ ಶಿಕ್ಷಣ ಕಡ್ಡಾಯವಾಗಬೇಕು ಎಂಬ ಬಲಪಂಥೀಯರ ಆಗ್ರಹವನ್ನೂ ಸಮಿತಿ ಕಡೆಗಣಿಸಿಲ್ಲ. ಈ ಪ್ರಾಚೀನ ಭಾಷೆಯನ್ನು ತ್ರಿಭಾಷಾ ಸೂತ್ರದನ್ವಯ ಐಚ್ಛಿಕ ವಿಷಯವಾಗಿರಿಸುವ ಬದಲು, ಒಂದು ಸ್ವತಂತ್ರ ವಿಷಯವಾಗಿ ಪ್ರಾಥಮಿಕ ಅಥವಾ ಮಾಧ್ಯಮಿಕ ಹಂತದಲ್ಲಿ ಬೋಧಿಸುವುದು ಒಳಿತೆಂಬುದು ಸಮಿತಿಯ ಅಭಿಪ್ರಾಯ. ಇದನ್ನು ಪರಿಶೀಲಿಸುವಂತೆ ಸರಕಾರಕ್ಕೆ ಸಲಹೆ ಮಾಡಿದೆ. ಸಂಸ್ಕೃತಕ್ಕೂ ಬದುಕಿಗೂ ನಿಕಟವಾದ ನಂಟಿದೆ. ಧಾರ್ಮಿಕ ವಿಧಿವಿಧಾನಗಳಲ್ಲಿ, ಆಚರಣೆಗಳಲ್ಲಿ, ಹಬ್ಬಹರಿದಿನಗಳಲ್ಲಿ ಸಂಸ್ಕೃತವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಹಾಗೂ ಸಂಸ್ಕೃತ ಭಾರತದ ದಾರ್ಶ ನಿಕ, ಸಾಂಸ್ಕೃತಿಕ, ವಿಜ್ಞಾನ ಮತ್ತು ಕಲಾ ಪರಂಪರೆಗಳಿಗೆ ಬೆಳಕಿಂಡಿಯಿದ್ದಂತೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸಂಸ್ಕೃತಕ್ಕೆ ತೋರಿಸಿರುವಷ್ಟೇ ಕಾಳಜಿ-ಕಳಕಳಿಗಳನ್ನು ಸಮಿತಿ ಪ್ರದೇಶ ಭಾಷೆಗಳಿಗೆ ತೋರಿಲ್ಲ. ವರದಿಯಲ್ಲಿ ಪ್ರದೇಶ ಭಾಷೆಗಳ ಪ್ರಸ್ತಾಪವೇ ಇಲ್ಲ. ಪ್ರದೇಶ ಭಾಷೆಗಳನ್ನು ಮರೆತು ರಾಷ್ಟ್ರೀಯ ಶಿಕ್ಷಣ ನೀತಿಯೊಂದು ಇರಲು ಸಾಧ್ಯವೆ? ‘ಶಿಕ್ಷಣ ಮಾಧ್ಯಮದ ಆಯ್ಕೆ ಪೋಷಕರ ಹಕ್ಕು, ಸರಕಾರ ಅದನ್ನು ಕಡ್ಡಾಯ ಮಾಡುವಂತಿಲ್ಲ’ ಎನ್ನುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಲು ಅನುಕೂಲವಾಗುವಂತೆ ಸಂವಿಧಾನದ ತಿದ್ದುಪಡಿಗಾಗಿ ಆಗ್ರಹಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಮಿತಿ ಶಿಕ್ಷಣ ನೀತಿಯಲ್ಲಿ ಪ್ರದೇಶಭಾಷೆಗಳ ಸ್ಥಾನಮಾನ ಏನಾಗಬೇಕು ಎಂಬುದನ್ನು ಗಮನಿಸಬೇಕಿತ್ತು. ಇಂಗ್ಲಿಷ್ ಶಿಕ್ಷಣ ಮಾಧ್ಯಮದ ಹಾವಳಿಯ ಎದುರು ಪ್ರದೇಶ ಭಾಷೆಗಳ ಅಸ್ತಿತ್ವವೇ ಗಂಡಾಂತರಕ್ಕೀಡಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸಮಿತಿ ಪ್ರದೇಶ ಭಾಷೆಗಳ ಬಗ್ಗೆ ದಿವ್ಯವೌನವಹಿಸಿರುವುದು ಆತಂಕಕಾರಿಯಾಗಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರವನ್ನು ಕೊನೆಗಾಣಿಸುವ ನಿಟ್ಟಿನಲ್ಲೂ ಸಮಿತಿ ಗಮನ ಹರಿಸಿರುವುದು ಒಂದು ಉತ್ತಮಾಂಶ. ಇದಕ್ಕೆ ಸಮಿತಿ ಹಲವಾರು ಸುಧಾರಣೆಗಳನ್ನು ಶಿಫಾರಸು ಮಾಡಿದೆ. ಶಿಕ್ಷಣ ಪದ್ಧತಿಯ ಆಡಳಿತ ನಿರ್ವಹಣೆಗಾಗಿ, ಐಎಎಸ್ ಮಾದರಿಯಲ್ಲಿ ಅಖಿಲ ಭಾರತ ಶಿಕ್ಷಣ ಸೇವಾ ಶ್ರೇಣಿಯೊಂದನ್ನು ರಚಿಸಬೇಕೆಂಬುದು ಇಂಥ ಶಿಫಾರಸುಗಳಲ್ಲೊಂದು. ಕೇಂದ್ರ ಸರಕಾರದಿಂದ ಹಣಕಾಸು ಪಡೆಯುವ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಏಕೈಕ ಕಾಯ್ದೆಯೊಂದರ ಅಗತ್ಯವನ್ನೂ ಸಮಿತಿ ಮನಗಂಡಿರುವಂತಿದೆ. ಅದಕ್ಕಾಗಿ ಉನ್ನತ ಶಿಕ್ಷಣ ಆಡಳಿತ ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಸಲಹೆ ಮಾಡಿದೆ.
ಸಮಿತಿಯ ಈ ಎಲ್ಲ ಸಲಹೆ/ಶಿಫಾರಸುಗಳೂ ಚರ್ಚಾರ್ಹವಾದವು ಎಂಬುದರಲ್ಲಿ ಎರಡನೆಯ ಮಾತಿರಲಾರದು. ಶಿಕ್ಷಣ ಎನ್ನುವುದು ದೇಶದ ಭವಿಷ್ಯ ಮತ್ತು ದೇಶದ ಭಾವೀ ಪ್ರಜೆಗಳ ಭವಿಷ್ಯಕ್ಕೆ ಸಂಬಂಧಿಸಿದ್ದು. ಭವಿತವ್ಯ ಕುರಿತು ಒಂದು ಸಮಿತಿ ಆಥವಾ ಸರಕಾರ ಆಖೈರು ನಿರ್ಧಾರ ಕೈಗೊಳ್ಳಲಾಗದು. ದೇಶ ಮತ್ತು ಅದರ ಭಾವೀ ಪ್ರಜೆಗಳ ಭವಿಷ್ಯ ಈಡಾಗಿರುವ ಈ ವಿಷಯ ದಲ್ಲಿ ಏಕಪಕ್ಷೀಯ ನಿರ್ಧಾರ ಸಲ್ಲದು.ರಾಷ್ಟ್ರವ್ಯಾಪಿ ಸಾರ್ವಜನಿಕ ಚರ್ಚೆಯಾಗಬೇಕು. ನಂತರವೇ ಸರ್ವಸಮ್ಮತವಾದ ರಾಷ್ಟ್ರೀಯ ಶಿಕ್ಷಣ ನೀತಿಯೊಂದು ರೂಪುಗೊಂಡು ಜಾರಿಗೆ ಬರಬೇಕು. ಹೀಗಿರುವಾಗ ಸಮಿತಿಯ ವರದಿಯನ್ನು ರಹಸ್ಯವಾಗಿಟ್ಟಿರುವುದರ ಉದ್ದೇಶ ಅರ್ಥವಾಗುವುತ್ತಿಲ್ಲ. ವರದಿಯನ್ನು ಬಹಿರಂಗ ಗೊಳಿಸಬೇಕೆಂಬ ಅಧ್ಯಕ್ಷ ಸುಬ್ರಮಣಿಯನ್ ಅವರ ಅಪೇಕ್ಷೆ ಸಾಧುವಾದುದೇ ಆಗಿದೆ. ಇಂಥದೊಂದು ಅಪೇಕ್ಷೆಯನ್ನು ಮುಂದಿಟ್ಟ ಸುಬ್ರಮಣಿಯನ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವೆ ಸ್ಮತಿ ಇರಾನಿಯವರ ವರ್ತನೆಯೂ ನಿಗೂಢವಾಗಿದೆ. ಏಕೀ ರಹಸ್ಯ?
ಭರತ ವಾಕ್ಯ: ಮಾಡುವುದು ಅನಾಚಾರ, ಮನೆಯ ಮುಂದೆ ಬೃಂದಾವನ