ಜುಲೈ 11ರಿಂದ 33 ಲಕ್ಷ ಕೇಂದ್ರ ಸರಕಾರಿ ನೌಕರರ ಮುಷ್ಕರ
7ನೆ ವೇತನ ಆಯೋಗದ ಶಿಫಾರಸು ಜಾರಿ
ಹೊಸದಿಲ್ಲಿ, ಜು.3: ಏಳನೆ ವೇತನ ಆಯೋಗದ ಶಿಫಾರಸ್ಸು ಜಾರಿ ವೇಳೆ ತೀರಾ ಕಡಿಮೆ ಪ್ರಮಾಣದ ವೇತನ ಹೆಚ್ಚಳವಾಗಿದೆ ಎಂದು ಆಪಾದಿಸಿ, ಜುಲೈ 11ರಿಂದ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿರುವ 33 ಲಕ್ಷ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಕನಿಷ್ಠ ವೇತನವನ್ನು ಕೇವಲ 18 ಸಾವಿರ ರೂ.ಗೆ ನಿಗದಿಪಡಿಸಲಾಗಿದೆ. ಕಳೆದ ವೇತನ ಆಯೋಗದಲ್ಲಿ ಮೂಲ ವೇತನ 7 ಸಾವಿರ ರೂಪಾಯಿ ಆಗಿತ್ತು. 2.57 ಪಟ್ಟು ಹೆಚ್ಚಿಸಿ ಇದನ್ನು 18 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಆದರೆ ನಾವು 3.68 ಪಟ್ಟು ಹೆಚ್ಚಿಸಲು ಆಗ್ರಹಿಸುತ್ತಿದ್ದೇವೆ ಎಂದು ಅಖಿಲ ಭಾರತ ರೈಲ್ವೆ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಜಂಟಿ ಕ್ರಿಯಾಮಂಡಳಿ (ಎನ್ಜೆಸಿಎ) ಸಂಚಾಲಕ ಶಿವಗೋಪಾಲ್ ಮಿಶ್ರಾ ಹೇಳಿದ್ದಾರೆ.
ಕೇಂದ್ರ ಸರಕಾರದ ಪ್ರಮುಖ ಆರು ಉದ್ಯೋಗಿ ಸಂಘಗಳನ್ನು ಸೇರಿಸಿಕೊಂಡು ಎನ್ಜೆಸಿಎ ರೂಪಿಸಲಾಗಿದೆ. ರಕ್ಷಣಾ ಸಿಬ್ಬಂದಿಯನ್ನು ಹೊರತುಪಡಿಸಿ 33 ಲಕ್ಷ ನೌಕರರು ಮುಷ್ಕರ ನಡೆಸಿ, ಸರಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸುತ್ತೇವೆ. ಕನಿಷ್ಠ ವೇತನವನ್ನು 26 ಸಾವಿರ ರೂ.ಗೆ ನಿಗದಿಪಡಿಸಬೇಕು ಎಂದು ಕಾನ್ಫಿಡರೇಷನ್ ಆಫ್ ಸೆಂಟ್ರಲ್ ಗವರ್ನಮೆಂಟ್ ಎಂಪ್ಲಾಯಿಸ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎನ್.ಕುಟ್ಟಿ ಪ್ರಕಟಿಸಿದ್ದಾರೆ.