ನಾಳೆ ಕೇಂದ್ರ ಸಂಪುಟ ಪುನಾರಚನೆ?
ಹೊಸದಿಲ್ಲಿ, ಜು.4: ಬಹುನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆಗೆ ಮುಹೂರ್ತ ಬಹುತೇಕ ನಿಗದಿಯಾಗಿದೆ. ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ ನಾಲ್ಕು ಆಫ್ರಿಕನ್ ದೇಶಗಳ ಪ್ರವಾಸಕ್ಕೆ ತೆರಳಲಿದ್ದು, ಇದಕ್ಕೆ ಮುನ್ನ ಅಂದರೆ ಜುಲೈ 5ರಂದು ಸಂಪುಟ ಪುನರ್ರಚಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.
ಎನ್ ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಎರಡನ ಪುನಾರಚನೆ ಇದಾಗಿದ್ದು, ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಆದ್ಯತೆಗಳನ್ನು ಪ್ರತಿಬಿಂಬಿಸುವ ಪುನರ್ರಚನೆ ಇದಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಸ್ಸಾಂ ಮುಖ್ಯಮಂತ್ರಿಯಾಗಿ ಸರ್ವಾನಂದ ಸೋನೋವಾಲ್ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರಿಂದ ಸಂಪುಟದಲ್ಲಿ ತೆರವಾದ ಕ್ರೀಡಾ ಸಚಿವ ಸ್ಥಾನವನ್ನು ಭರ್ತಿ ಮಾಡುವುದು ಖಚಿತ. ಇದರ ಜತೆಗೆ ಸಂಪುಟಕ್ಕೆ ಇನ್ನಷ್ಟು ಹೊಸ ಮುಖಗಳು ಸೇರ್ಪಡೆಯಾಗಲಿವೆ ಎಂದು ಹೇಳಲಾಗಿದೆ. ಬಹುತೇಕ ಖಾತೆ ಬದಲಾವಣೆಗಳು ರಾಜ್ಯ ಸಚಿವರ ಹಂತದಲ್ಲಿ ಆಗಲಿವೆ ಎಂದು ತಿಳಿದುಬಂದಿದೆ.
Next Story