ಆಹಾರ ಸಂಸ್ಕೃತಿಯ ಮೇಲಿನ ಆಕ್ರಮಣ
ಈ ಕೆಳಕಂಡ ನಾಲ್ಕು ಸಂಗತಿಗಳು ಭಾರತದ ದನದ(ಗೋ/ಎಮ್ಮೆ)ಮಾಂಸ ಸೇವನೆಯ ಸುತ್ತ ಇರುವ ವಿವಾದಗಳು/ಹಿಂಸಾತ್ಮಕ ಘಟನೆಗಳ ಮೇಲೆ ಒಂದು ಝಲಕ್ ಬೀರುತ್ತವೆ.
1) ಭಾರತಕ್ಕೆ ದನದ (ಎಮ್ಮೆ)ಮಾಂಸದ ರಫ್ತಿನಲ್ಲಿ ಪ್ರಪಂಚದಲ್ಲೇ ಪ್ರಥಮ ಸ್ಥಾನ(ಇದರಲ್ಲಿ ಗೋಮಾಂಸದ ಪಾಲು ಇದೆಯೇ ಎಂಬುದು ಊಹೆಗೆ ಬಿಟ್ಟ ವಿಚಾರ). 2014-15ರಲ್ಲಿ 2.4 ಮಿಲಿಯ ಟನ್ಗಳಷ್ಟು ಮಾಂಸ ಭಾರತದಿಂದ ರಫ್ತಾಯಿತು. ಇದು ವಿಶ್ವದ ಒಟ್ಟು ಉತ್ಪಾದನೆಯ ಶೇ.23.3ರಷ್ಟಿತ್ತು. ಇದರಿಂದ ನಮ್ಮ ದೇಶ 2014ರಲ್ಲಿ ಸುಮಾರು 4.8 ಮಿಲಿಯ ಡಾಲರ್ಗಳಷ್ಟು ಲಾಭ ಗಳಿಸಿತು. ಈ ಸಾಧನೆ ಬಾಸ್ಮತಿ ಅಕ್ಕಿಯ ರಫ್ತಿನಿಂದ ದೊರೆತ ಲಾಭಕ್ಕಿಂತಲೂ ಮಿಗಿಲಾಗಿತ್ತು ! ಇದೇ ಸಮಯದಲ್ಲಿ ಆಂತರಿಕ ಸೇವನೆಯಲ್ಲಿ ಶೇ. 44ರಷ್ಟು ಕಡಿತ ಕಂಡು ಬಂದಿತು.
2) ಕಳೆದ ಸೆಪ್ಟಂಬರ್ 28ರ ರಾತ್ರಿ ನೋಯಿಡಾ ಸಮೀಪವಿರುವ ಉತ್ತರಪ್ರದೇಶದ ದಾದ್ರಿ ಹಳ್ಳಿಯಲ್ಲಿ ಗೋಮಾಂಸ ಸೇವನೆ ಮತ್ತು ಸಂಗ್ರಹದ ಶಂಕೆಯಿಂದ ಉದ್ರಿಕ್ತ ಗುಂಪೊಂದು ಇಖ್ಲಾಕ್ ಎಂಬವರ ಮನೆಗೆ ನುಗ್ಗಿ, ಅವರನ್ನು ಥಳಿಸಿ, ಹತ್ಯೆ ಮಾಡಿತು. ಆತನ ಒಬ್ಬ ಮಗ ಗಾಯಗೊಂಡು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರುವಂತಾಯಿತು. ಪ್ರಸ್ತುತ ಈ ಕುಟುಂಬ ಆ ಹಳ್ಳಿಯನ್ನು ತೊರೆದು ಚೆನ್ನೈನಲ್ಲಿ ನೆಲೆಸಲು ಯೋಚಿಸಿತ್ತು. ಅಲ್ಲದೆ, ಆ ಹಳ್ಳಿಯ ಇತರ ಮುಸ್ಲಿಮ್ ಕುಟುಂಬಗಳು ಸಹ ಬೇರೆಡೆಗೆ ಸ್ಥಳಾಂತರಿಸುವತ್ತ ಚಿಂತನೆ ಹರಿಸಿತ್ತು.
3) ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಕೆಲವು ವರ್ಷಗಳ ಹಿಂದೆ ದಲಿತ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಗೋಮಾಂಸ ನಿಷೇಧಿಸಿದ್ದಕ್ಕೆ ಪ್ರತಿಭಟಿಸಿ ಗೋಮಾಂಸ ಉತ್ಸವವನ್ನು ಏರ್ಪಡಿಸಿದರು. ಇದನ್ನು ಉಚ್ಚ ಜಾತಿಯ ಹಿಂದುಗಳು ಪ್ರತಿರೋಧಿಸಿದರು. ತಿಕ್ಕಾಟಗಳು ಜರೂಗಿದವು. ಒಬ್ಬ ವಿದ್ಯಾರ್ಥಿ ಚೂರಿಯ ಇರಿತಕ್ಕೆ ಒಳಗಾದ. ಕೆಲವು ಪೊಲೀಸ್ ಜೀಪುಗಳು ಬೆಂಕಿೆಗೆ ಆಹುತಿಯಾದವು.
4) ಮೇಲಿನ ಗೋಮಾಂಸ ಉತ್ಸವದಲ್ಲಿ ತಮಿಳುನಾಡಿನ ಒಬ್ಬ ದಲಿತ ಬರಹಗಾರ್ತಿ, ಕವಿಯಿತ್ರಿ, ಮಹಿಳಾವಾದಿಯಾಗಿರುವ ಮೀನಾ ಕಂದಸ್ವಾಮಿ ಭಾಗವಹಿಸಿದರು. ಅವರು ಕೆಲವು ಗೋಮಾಂಸದ ತುಂಡುಗಳನ್ನು ತಿಂದಿದ್ದಕ್ಕೆ ಸೈಬರ್ ಲೋಕದಲ್ಲಿ ಅವರ ಮೇಲೆ ದಾಳಿಗಳಾದವು. ಮೇಲ್ವರ್ಗದ ಹಿಂದುಗಳು ಆಕೆ ಗೋಮಾಂಸ ಸೇವನೆಯನ್ನು ಸಮರ್ಥಿಸುತ್ತಿದ್ದಾರೆಂದು ಜರೆದರು. ಹೀಗೆ ಮಾಡಿದ್ದರಿಂದ, ಅವರು ಭಾರತದ, ಅದರಲ್ಲೂ ತಮಿಳು ಸಂಸ್ಕೃತಿಗೆ ಅಪಚಾರವೆಸಗಿದ್ದಾರೆಂದು ಅವಾಚ್ಯ ಶಬ್ದಗಳಿಂದ ಬೈದರು. ಈ ಕೃತ್ಯ ಎಸಗಿದ್ದಕ್ಕೆ ಮೀನಾರನ್ನು ಗ್ಯಾಂಗ್ ರೇಪ್ ಮಾಡಿ, ಆ ವೃತ್ತಾಂತವನ್ನು ನೇರ ಪ್ರಸಾರ ಮಾಡಬೇಕೆಂದು ಸಾರಿದರು! ಆಕೆಯನ್ನು ಆಧುನಿಕ ಕಾಲದ ಶೂರ್ಪನಖಿ ಎಂದು ಬಣ್ಣಿಸಲಾಯಿತು.
ಇತ್ತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದ ಆಹಾರ ಸಂಸ್ಕೃತಿಯ ಮೇಲೆ ಅವ್ಯಾಹತ ದಾಳಿಗಳಾಗುತ್ತಿರುವುದಕ್ಕೆ ಮೇಲಿನ ಘಟನೆಗಳು ದ್ಯೋತಕವಾಗಿವೆ. ಮಾಂಸಾಹಾರ ತಾಮಸಿಕವೆಂದು, ಅದನ್ನು ಸೇವಿಸುವುದರಿಂದ ವ್ಯಕ್ತಿಯೊಬ್ಬನ ನಡವಳಿಕೆಯಲ್ಲಿ ನಕಾರಾತ್ಮಕ ಅಂಶಗಳು ಅಡಕಗೊಳ್ಳುವುದೆಂದು ನಂಬುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಇದಕ್ಕೆ ಇಂಬು ಕೊಡುವ ಶಕ್ತಿಗಳು ವ್ಯವಸ್ಥಿತವಾದ ಪ್ರಚಾರದಲ್ಲಿ ತೊಡಗುತ್ತವೆ. ಆದರೆ ಮಾಂಸಾಹಾರವನ್ನು ಭುಜಿಸುವ ಹಲವರು ಗೋಮಾಂಸವನ್ನು ಸೇವಿಸುವುದಿಲ್ಲ. ಒಟ್ಟಿನಲ್ಲಿ, ಆಹಾರ ಸೇವನೆ ಅವರವರ ಆಯ್ಕೆಯ ವಿಷಯವಾಗಿರುತ್ತದೆ. ಈ ನಿಟ್ಟನಲ್ಲಿ ನಮ್ಮ ದೇಶದ ಅನೇಕ ರಾಜ್ಯ ಸರಕಾರಗಳು ಗೋಮಾಂಸದ ಬಳಕೆ ಹಾಗೂ ಸಂಗ್ರಹಕ್ಕೆ ಸಂಬಂಧಿಸಿದಂತೆ ನಿಷೇಧಾತ್ಮಕ ಕಾನೂನುಗಳನ್ನು ಜಾರಿ ಮಾಡಿವೆ. ಇವು ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ನಾಗರಿಕರ ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತವೆ ಹಾಗೂ ಒಂದರ್ಥದಲ್ಲಿ ಯಾವ ಆಹಾರ ಸೇವಿಸಬೇಕೆಂಬ ಪ್ರತ್ಯಕ್ಷ ಮತ್ತು ಪರೋಕ್ಷ ಒತ್ತಡ ಹೇರುವುದು ಮಾನಸಿಕ ಹಿಂಸೆಯಾಗುವುದಿಲ್ಲವೇ ಎಂಬುದು ಹಲವು ಸಾಮಾಜಿಕ ಸಂಘಟನೆಗಳು ಮುಂದಿಡುವ ಪ್ರಶ್ನೆಗಳು. ಇದು ಯೋಚನಾರ್ಹ ವಿಷಯವೇ ಸರಿ.
ಬದುಕನ್ನು ಸಾಗಿಸಲು ಅವಶ್ಯವಾಗಿ ಬೇಕಾಗುವ ಆಹಾರವನ್ನು ಸಮುದಾಯಗಳ ನಡುವೆ ಬಿರುಕನ್ನು ಉಂಟುಮಾಡುವಂತಹ ಸಾಧನವಾಗಿ ಸ್ಥಾಪಿತ ಹಿತಾಸಕ್ತಿಗಳುಳ್ಳ ಸಂಸ್ಥೆ, ಗುಂಪು ಮತ್ತು ವ್ಯಕ್ತಿಗಳ ಚಟುವಟಿಕೆಗಳನ್ನು, ಅವುಗಳ ಹಿಂದಿರುವ ರಾಜಕೀಯ ಹುನ್ನಾರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ, ನಮ್ಮ ಸಮ್ಮಿಳಿತ ಸಂಸ್ಕೃತಿಯನ್ನು ಜತನ ಮಾಡುವುದು ವರ್ತಮಾನದ ತುರ್ತು.
ಬರೆದವರು :ಮ ಶ್ರೀ ಮುರಳಿ ಕೃಷ್ಣ (ಒಅ ಎಸ್ ಮುರಳಿ ಕೃಷ್ಣ)