ಉತ್ತರಪ್ರದೇಶ: ಸಮಾಜವಾದಿ ಪಕ್ಷದ ನಾಯಕನಿಂದ ಗೂಂಡಾಗಿರಿ
ವಕೀಲ, ಆತನ ಮನೆಯವರನ್ನು ಅಟ್ಟಾಡಿಸಿ ಹೊಡೆದರು
ಲಕ್ನೊ,ಜುಲೈ 8: ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಕ್ಷ ನಾಯಕರಿಗೆ ಮತ್ತುಕಾರ್ಯಕರ್ತರಿಗೆ ಜನರೊಂದಿಗೆ ವಿನಯದಿಂದ ವರ್ತಿಸಬೇಕೆಂದು ಹಲವು ಬಾರಿ ವಿನಂತಿಸಿಕೊಂಡಿದ್ದಾರೆ. ಆದರೆ ಅವರ ಪಕ್ಷದವರ ಗೂಂಡಾಗಿರಿಯಂತೂ ಮುಂದುವರಿಯುತ್ತಲೇ ಇದೆ. ಭೂ ವಿವಾದವೊಂದಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಅವನ ಗೂಂಡಾಗಳು ಓರ್ವ ವಕೀಲ ಹಾಗೂ ಅವರ ಕುಟುಂಬದ ಮಹಿಳೆಯರನ್ನು ಓಡಿಸಿಕೊಂಡು ಹೋಗಿ ಹೊಡೆದ ಘಟನೆ ಲಕ್ನೊಸಮೀಪದ ಚಿನ್ಹಟ್ ಬಾಘಾಮವು ಎಂಬ ಗ್ರಾಮದಲ್ಲಿ ನಡೆದಿದ್ದು ಆತಂಕ ಸೃಷ್ಟಿಸಿದೆ.
ಸಮಾಜವಾದಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ವಿಜಯ್ ಬಹದೂರ್ ಯಾದವ್ ಮತ್ತು ಆತನ ಗೂಂಡಾಗಳು ಸೇರಿ ಜಮೀನು ವಿವಾದವೊಂದರ ಕಾರಣವಾಗಿ ಓರ್ವ ವಕೀಲ ಹಾಗೂ ಅವನ ಮನೆಯ ಮಹಿಳೆಯರನ್ನು ಗ್ಯಾಂಗ್ ವಾರ್ ರೀತಿ ಅಟ್ಟಾಡಿಸಿ ಹೊಡೆದಿದ್ದಾರೆ. ಈ ಹೊಯ್ ಕೈಯಲ್ಲಿ ಹಲವುಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಕೀಲ ಇಂದಲ್ ಲೋಧಿಯಾ ಬೆಂಬಲಿಗರು ಕೂಡಾ ಬಹಾದೂರ್ ಯಾದವ್ನ ಕಡೆಯವರಿಗೆ ಕಲ್ಲೆಸೆದಿದ್ದಾರೆ. ಹೀಗಾಗಿ ಎರಡೂ ಕಡೆಯಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಳ್ಳುವಂತಾಯಿತು ಎಂದು ವರದಿಗಳು ತಿಳಿಸಿವೆ.
ಗಾಯಗೊಂಡಿರುವ ವಕೀಲರ ಕಡೆಯವರು ಎಸ್ಎಸ್ಪಿ ಮನೆಯ ಮುಂದೆ ಗುಂಪು ಸೇರಿ ಪ್ರತಿಭಟನೆ ನಡೆಸಿದ್ದರೆ. ಜಿಲ್ಲಾ ಪಂಚಾಯತ್ ಸದಸ್ಯನ ಕಡೆಯವರು ಪೊಲೀಸ್ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ್ದಾರೆ. ಎರಡೂ ಕಡೆಯವರು ಪೊಲೀಸರ ವಿರುದ್ಧ ನಿಷ್ಕ್ರಿಯತೆಯ ಆರೋಪ ಹೊರಿಸಿದ್ದಾರೆ.