ಮೆಟ್ಟಿನಡ್ಕ ವೇದಾವತಿ ಕೊಲೆ ಪ್ರಕರಣ: ಆರೋಪಿಗೆ ಮೂರು ದಿನಗಳ ಪೊಲೀಸ್ ಕಸ್ಟಡಿ
ಸುಳ್ಯ, ಜು.8: ಮೆಟ್ಟಿನಡ್ಕ ಸಮೀಪದ ಪೆರ್ಗೋಡಿಯ ಮಹಿಳೆ ವೇದಾವತಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಕರುಣಾಕರನನ್ನು ಸುಳ್ಯ ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ಸಾಕ್ಷನಾಶ ಮಾಡಿದ ಆರೋಪದಲ್ಲಿ ಬಂಧಿತರಾದ ಕರುಣಾಕರನ ಪತ್ನಿ ಪ್ರೇಮಾಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕೃಷಿಕರಾಗಿರುವ ದೇರಪ್ಪಜ್ಜನಮನೆಯ ಪೆರ್ಗೋಡಿ ಜಯರಾಮ ಎಂಬವರ ಪತ್ನಿ ಗೃಹಿಣಿ ವೇದಾವತಿ ಅವರನ್ನು ಎ.16ರಂದು ಮಧ್ಯಾಹ್ನ 3 ರ ವೇಳೆಗೆ ಅವರ ಮನೆಯಲ್ಲೆ ಬರ್ಬರವಾಗಿ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಸಂಜೆ ವೇಳೆಗೆ ಅಳಿಯ ವಿಜೇತ್ ಮನೆಗೆ ಬಂದಾಗ ಅಡುಗೆ ಕೊಠಡಿಯಲ್ಲಿ ವೇದಾವತಿ ಅವರ ಮೃತದೇಹ ರಕ್ತಸಿಕ್ತವಾಗಿ ಬಿದ್ದಿತ್ತು.
ಕೊಲೆ ನಡೆದ ಸ್ಥಳದಲ್ಲಿ ಕೊಲೆಗೆ ಬಳಸಿದ ಎರಡು ಕತ್ತಿ ಹಾಗೂ ಪಕ್ಕದ ಗೋಡೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಕೊಲೆ ನಡೆದ ಬಳಿಕ ಚಹರೆ ಸಿಗಬಾರದು ಎಂಬ ಕಾರಣಕ್ಕೆ ಕೊಠಡಿಗಳನ್ನು ನೀರು ಹಾಕಿ ತೊಳೆದಿದ್ದರು. ಘಟನೆ ನಡೆದ ವೇಳೆ ಮನೆಯ ಕೋಣೆಗಳ ಕಪಾಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಾಗೂ ಕೆಲ ವೌಲ್ಯದ ಆಭರಣಗಳು ಕಳವಾಗಿದ್ದವು. ಶವದ ಮೈಮೇಲಿದ್ದ ಆಭರಣಗಳನ್ನು ಕೃತ್ಯ ನಡೆಸಿದವರು ಬಿಟ್ಟು ಹೋಗಿದ್ದರು. ಪುತ್ತೂರು ಎಎಸ್ಪಿ ರಿಷ್ಯಂತ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿತ್ತು.
ಶುಕ್ರವಾರ ಆರೋಪಿ ಕರುಣಾಕರನನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ಪ್ರಕರಣದ ಸಾಕ್ಷನಾಶ ಮಾಡಿದ ಆರೋಪದಲ್ಲಿ ಬಂಧಿತರಾದ ಕರುಣಾಕರನ ಪತ್ನಿ ಪ್ರೇಮಾಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.