ಡಾ.ಝಾಕಿರ್ ನಾಯ್ಕ್ ರನ್ನು ಚರ್ಚಾ ವಿಷಯವನ್ನಾಗಿಸುವುದು ಸಂವಿಧಾನಕ್ಕೆ ವಿರುದ್ಧ: ಜಮಾಅತೆ ಇಸ್ಲಾಮೀ ಹಿಂದ್
ಮಂಗಳೂರು, ಜು. 9: ಅಂತಾರಾಷ್ಟ್ರೀಯ ಖ್ಯಾತಿಯ ಮುಸ್ಲಿಂ ಧಾರ್ಮಿಕ ವಿದ್ವಾಂಸ ಡಾ.ಝಾಕಿರ್ ನಾಯ್ಕ್ ರನ್ನು ಸರಕಾರದ ಕೆಲವು ವ್ಯಕ್ತಿಗಳು ಮತ್ತು ಮಾಧ್ಯಮದ ಕೆಲವು ವಲಯಗಳ ಮೂಲಕ ನಕಾರಾತ್ಮಕ ರೀತಿಯಲ್ಲಿ ಚರ್ಚಾ ವಿಷಯವನ್ನಾಗಿ ಮಾಡುವ ಪ್ರಯತ್ನವನ್ನು ಜಮಾಅತೆ ಇಸ್ಲಾಮೀ ಹಿಂದ್ ಸಂವಿಧಾನದಲ್ಲಿ ನೀಡಲಾಗಿರುವ ವಿಚಾರ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಭದ್ರತೆಯನ್ನು ಸಂಘರ್ಷಿಸುವ, ಅನಗತ್ಯ ವ್ಯರ್ಥ ಮತ್ತು ಕಳವಳಕಾರಿ ಕೃತ್ಯ ಎಂದು ಪರಿಗಣಿಸಿ ಅದರಿಂದ ದೂರವಿರುವಂತೆ ಸಲಹೆ ನೀಡಿದೆ.
ಡಾ.ಝಾಕಿರ್ ನಾಯ್ಕ್ ದೇಶದ ಇತರ ಧರ್ಮಗಳ ನೂರಾರು ಖ್ಯಾತ ವ್ಯಕ್ತಿಗಳಂತೆ ಈ ಕಾಲದ ಎಲ್ಲ ಲಭ್ಯ ಪ್ರಚಾರ ಮಾಧ್ಯಮಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿದ್ದುಕೊಂಡು ಸಭ್ಯ ಹಾಗೂ ವೈಜ್ಞಾನಿಕ ರೀತಿಯಲ್ಲಿ ಏಕದೇವತ್ವ, ಪ್ರವಾದಿತ್ವ ಮತ್ತು ಪರಲೋಕವೆಂಬ ಇಸ್ಲಾಮಿನ ಸಂದೇಶವನ್ನು, ಅತ್ಯಂತ ಸೌಹಾರ್ದಮಯ ವಾತಾವರಣದಲ್ಲಿ ಮುಂದಿಡುತ್ತಾ ಬಂದಿದ್ದಾರೆ. ಇದನ್ನು ಈ ದೇಶದ ಮಾತ್ರವಲ್ಲ ಲೋಕದಾದ್ಯಂತ ಕೋಟಿಗಟ್ಟಲೆ ಜನರು ಬಹಳ ಗಮನಕೊಟ್ಟು ಆಸಕ್ತಿಯೊಂದಿಗೆ ಕೇಳುತ್ತಾ ಇದ್ದಾರೆ. ಅವುಗಳಲ್ಲಿ ಸಂವಿಧಾನ ಮತ್ತು ಸದಾಚಾರಕ್ಕೆ ವಿರುದ್ಧವಾದ ಯಾವುದನ್ನೂ ಹೇಳುತ್ತಿಲ್ಲವೆಂದು ಜಮಾಅತೆ ಇಸ್ಲಾಮಿ ಹಿಂದ್ನ ಉಪಾಧ್ಯಕ್ಷ ನುಸ್ರತ್ ಅಲಿ ಹೇಳಿದ್ದಾರೆ.
ವಿಚಿತ್ರವೇನೆಂದರೆ ಈಗ ಹಠಾತ್ತನೆ ಅವರ ಮಾನವೀಯ ಸೇವೆಗಳನ್ನು ವಿಶ್ಲೇಷಣೆಗೊಳಪಡಿಸುವ ಅಗತ್ಯವನ್ನು ಹೇಳಿ, ಅದಕ್ಕೆ ಒಂದು ವಿಶಿಷ್ಟ ಬಣ್ಣವನ್ನು ಬಳಿದು ದೇಶದಲ್ಲಿ ಮೊದಲೇ ಇರುವ ಕೋಮು ಸಂಘರ್ಷಾವಸ್ಥೆಯನ್ನು ಇನ್ನಷ್ಟು ಕೆಡಿಸುವ ನೀಚ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.
ಸರಕಾರ ಮತ್ತು ಮಾಧ್ಯಮಗಳಿಗೆ ತಾತ್ಕಾಲಿಕ ಮತ್ತು ಹಂಗಾಮೀ ಹಿತಾಸಕ್ತಿಗಳ ಉದ್ದೇಶದಿಂದ ಇಂತಹ ಕ್ರಮ ಮತ್ತು ನೀತಿ ಭೂಷಣವಲ್ಲ. ಇದರಿಂದ ಸಂವಿಧಾನದ ಮೂಲಕ್ಕೆ ಪ್ರಹಾರ ಬೀಳುತ್ತದೆ. ದೇಶದ ಪರಂಪರೆಗೆ ವಿರುದ್ಧವಾಗುತ್ತದೆ. ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ನೆಚ್ಚಿನ ದೇಶದ ಚಿತ್ರಣ ಮಸುಕಾಗುತ್ತದೆ. ದೇಶದಲ್ಲಿ ಅನೇಕ ಮೂಲಭೂತ ಸಮಸ್ಯೆಗಳಿವೆ. ವಿದೇಶಗಳಲ್ಲಿರುವ ಭಾರಿ ಮೊತ್ತದ ಕಳ್ಳ ಹಣ ದೇಶಕ್ಕೆ ತರುವುದರಿಂದ ಹಿಡಿದು ಬಡತನ, ದಾರಿದ್ರ ನಿರ್ಮೂಲನೆ, ನಿರ್ಮಾಣ ಅಭಿವೃದ್ಧಿಯ ಅನೇಕ ಅಪೂರ್ಣ ಕೆಲಸಗಳು ಇತ್ಯಾದಿಗಳ ಕಡೆಗೆ ಹೆಚ್ಚು ಗಮನ ಕೊಡುವ ಅಗತ್ಯವಿದೆ. ಸರಕಾರವು ಇಂತಹ ಮೂಲಭೂತ ಸೌಲಭ್ಯಗಳ ಕಡೆಗೆ ಪ್ರಾಮಾಣಿವಾಗಿ ಗಮನ ಹರಿಸುವುದು ಉತ್ತಮ. ಇದು ಅವರ ಹೊಣೆಗಾರಿಕೆಯೂ ಆಗಿದೆ ಎಂದು ನುಸ್ರತ್ ಅಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.