ಜನರಿಗೆ ಸೇವೆ ಕೊಡುವುದೇ ಸಹಕಾರಿ ಸಂಘಗಳ ಆದ್ಯತೆಯಾಗಬೇಕು : ಡಾ. ರಾಜೇಂದ್ರ ಕುಮಾರ್
ಮೂಡುಬಿದಿರೆಯಲ್ಲಿ ಆಳ್ವಾಸ್ ಸಹಕಾರ ಸಂಘ ಉದ್ಘಾಟನೆ
ಮೂಡುಬಿದಿರೆ,ಜು.10: ಸೇವೆಗೆ ಇನ್ನೊಂದು ಹೆಸರೇ ಸಹಕಾರಿ ಸಂಘ. ಜನರ ಬಳಿಗೆ ಹೋಗಿ ಜನರಿಗೆ ಸೇವೆ ಕೊಡುವುದೇ ಸಹಕಾರಿ ಸಂಘಗಳ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಕೆಲಸ ಮಾಡಬೇಕು ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸಿನ ಆವರಣದಲ್ಲಿ ನೂತನವಾಗಿ ಆರಂಭಗೊಂಡ ಆಳ್ವಾಸ್ ಸಹಕಾರ ಸಂಘವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಇಂದು ಸಹಕಾರಿ ಸಂಘಗಳು ವಿವಿಧ ರೀತಿಯಾಗಿ ಭದ್ರವಾಗಿ ನೆಲೆ ನಿಂತು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಸಹಕಾರಿ ಕ್ಷೇತ್ರದಲ್ಲಿ ಕೆಲವು ತತ್ವಗಳಿವೆ. ಸಹಕಾರಿ ಕ್ಷೇತ್ರದಿಂದ ಬಂದ ಎಲ್ಲಾ ಲಾಭಾಂಶವನ್ನೆಲ್ಲಾ ಕನ್ನಡ ಮಾಧ್ಯಮ ಶಾಲೆಗಳಿಗೆ ಬಳಸಲು ಸಾಧ್ಯವಿಲ್ಲ. ಕೆಲವೊಂದು ವಿಷಯಗಳಿಗೆ ಪ್ರತ್ಯೇಕವಾಗಿಟ್ಟು ಅಮೇಲೆ ಉಳಿದ ಸ್ವಲ್ಪವನ್ನು "ವಿದ್ಯಾನಿಧಿ"ಯಾಗಿ ಶಿಕ್ಷಣಕ್ಕೆ ಬಳಸಬಹುದು ಎಂದು ತಿಳಿಸಿದ ಅವರು ಆಳ್ವರು ಆರಂಭಿಸಿರುವ ಈ ಸಹಕಾರಿ ಸಂಘವು ಅಭಿವೃದ್ಧಿಯನ್ನು ಹೊಂದಲಿ ಎಂದು ಶುಭ ಹಾರೈಸಿದರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಸಹಕಾರಿ ಸಂಘಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಸಾಧನೆಗಳನ್ನು ಮಾಡಿವೆ. ಪ್ರಧಾನ ಮಂತ್ರಿ ಮೋದಿಯವರ ಜನ್ಧನ್ ಯೋಜನೆ ಬರುವ ಮೊದಲೇ ಜಿಲ್ಲೆಯಲ್ಲಿ ಬ್ಯಾಂಕ್ ಖಾತೆ ಹೊಂದಿದವರ ಸಂಖ್ಯೆಯೂ ದೇಶದಲ್ಲೇ ಗರಿಷ್ಠವಾಗಿತ್ತು ಎಂಬುದನ್ನು ಮೋದೀಜಿ ಅವರೇ ಗಮನಿಸಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದ ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಮೂಲ್ಕಿ ಚರ್ಚಿನ ಧರ್ಮಗುರು ರೇ/ಎಫ್.ಎಕ್ಸ್.ಗೋಮ್ಸ್, ಚೌಟರ ಅರಮನೆಯ ಕುಲದೀಪ ಎಂ, ಉದ್ಯಮಿಗಳಾದ ಶ್ರೀಪತಿ ಭಟ್, ಅಬುಲ್ ಅಲಾ ಪುತ್ತಿಗೆ, ಆಳ್ವಾಸ್ನ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ, ಸೀತಾರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆಳ್ವಾಸ್ ಸಹಕಾರ ಸಂಘ (ನಿ) ಮುಖ್ಯ ಪ್ರವರ್ತಕ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಹಕಾರ ಸಂಘದ ಕಲ್ಪನೆ ಚಿಗುರೊಡೆದದ್ದು ಇತ್ತೀಚೆಗೆ. ಈಗಾಗಲೇ 600 ಜನರು ಸದಸ್ಯರಾಗಿದ್ದು ರೂ 30 ಲಕ್ಷ ಠೇವಣಿ ಸಂಗ್ರಹವಾಗಿದೆ. ಬರುವ ಲಾಭಾಂಶವನ್ನು ಸದಸ್ಯರಿಗೆ ಮತ್ತು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಉಪನ್ಯಾಸಕ ಯೊಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಪಡಿವಾಳ್ ವಂದಿಸಿದರು.