ರಸ್ತೆ ಸುರಕ್ಷತಾ ಕ್ರಮಗಳು ಕಾನೂನಿಗಷ್ಟೇ ಸೀಮಿತವಾದರೆ ಸಾಲದು: ಈಶ್ವರ ನಾಯ್ಕ
ಭಟ್ಕಳ: ನಗರ ಪೋಲೀಸ್ ಠಾಣೆ, ರೋಟರಿ ಕ್ಲಬ್ ಭಟ್ಕಳ ಹಾಗೂ ಶ್ರೀ ಗುರು ಸುಧೀಂದ್ರ ಬಿಬಿಎ, ಬಿಸಿಎ ಕಾಲೇಜು ವತಿಯಿಂದ ಜಂಟಿಯಾಗಿ ಎರ್ಪಡಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ಕಾಸ್ಕಾರ್ಡ ಬ್ಯಾಂಕ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ ರಸ್ತೆ ಸುರಕ್ಷತಾ ಕ್ರಮಗಳು ಕಾನೂನಿಗಷ್ಟೇ ಸೀಮಿತವಾದರೆ ಸಾಲದು ಅದನ್ನು ಸಾರ್ವಜನಿಕರು ಪಾಲಿಸಿಕೊಂಡು ಬರಬೇಕು ಆ ನಿಟ್ಟಿನಲ್ಲಿ ಪೊಲೀಸರು ಕೂಡಾ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಬೇಕು ಎಂದರು.
ಇಮದು ಜನ ಸಾಮಾನ್ಯರಿಗೆ ಕಾನೂನಿನ ಭಯವಿಲ್ಲ ಎನ್ನುವಂತಹ ವಾತಾವರಣ ಮೂಡಿದೆ. ತಮ್ಮಲ್ಲಿರುವ ಧನಬಲ, ಜನಬಲ ಮತ್ತು ರಾಜಕೀಯ ಬಲದಿಂದ ಎನನ್ನು ಬೇಕಾದರೂ ಮಾಡಬಹುದು ಎನ್ನುವ ಅಹಂಗೆ ಜನತೆ ಒಳಗಾದಂತೆ ಕಾಣುತ್ತಿದ್ದು ಅದು ದೂರಾಗಬೇಕು. ನಿಯಮ ಉಲ್ಲಂಘಿಸಿದವರಿ ದಂಡ ಕಟ್ಟಿದರಾಯಿತು ಎನ್ನುವ ಧೋರಣೆಯಿಂದ ಹೊರ ಬಂದಾಗ ಮಾತ್ರ ರಸ್ತೆ ಸುರಕ್ಷತಾ ಕಾರ್ಯಕ್ರಮಗಳು ಯಶಸ್ವೀಯಾಗಲು ಸಾಧ್ಯ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎಂ. ಖಾನ್ ಮಾತನಾಡಿ ಇಂದು ಜನತೆ ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡುತ್ತಿರುವುದರಿಂದ ಅನೇಕ ಅನಾಹುತಕ್ಕೆ ದಾರಿಯಾಗುತ್ತಿದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಕುಡಿದು ಚಾಲನೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಲ್ಲದೇ ವಾಹನದ ಹೆಡ್ ಲೈಟನ್ನು ಅಗತ್ಯಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಮಾಡಿಟ್ಟುಕೊಳ್ಳುವುದು, ಹೆಚ್ಚುವರಿ ಲೈಟ್ ಹಾಕುವುದು ಮಾಡಿಕೊಂಡು ಎದುರುಗಡೆ ವಾಹನ ಸವಾರರಿಗೆ ಕಣ್ಣು ಕುಕ್ಕಿಸುವಂತೆ ಮಾಡುವುದು, ನಿಯಮ ಉಲ್ಲಂಘಿಸಿ ವಾಹನ ಪಾರ್ಕಿಂಗ್ ಮಾಡುವುದು ಇತ್ಯಾದಿಗಳ ಕುರಿತು ಇಲಾಖೆ ಗಮನ ಹರಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಭಟ್ಕಳ ನಗರ ಪೋಲೀಸ್ ಠಾಣೆಯ ಪಿ.ಎಸ್.ಐ., ರೇವತಿ ಆರ್. ಮಾತನಾಡಿ ರಸ್ತೆ ನಿಯಮಗಳನ್ನು ಉಲ್ಲಂಘಿಸಿದರೆ 2 ಸಾವಿರದಿಂದ 5 ಸಾವಿರದವರೆಗೂ ದಂಡ ವಿಧಿಸುವ ಅವಕಾಶವಿದ್ದು, ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವ ಸವಾರನಿಗೆ ಮಾತ್ರವಲ್ಲದೇ ವಾಹನದ ಮಾಲೀಕನಿಗೂ 1 ಸಾವಿರ ದಂಡ ವಿಧಿಸಲು ಅವಕಾಶವಿದೆ. ಇನ್ನು ರಸ್ತೆಯ ಹೊಂಡಗಳಿಂದ ಅಪಘಾತ ಸಂಭವಿಸಿದರೆ ಹೆದ್ದಾರಿ ಇಲಾಖೆಯ ವಿರುದ್ದವೂ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಕೆಲವೊಂದು ವಾಹನಗಳ ಕರ್ಕಶ ಧ್ವನಿಗೆ ನಿಯಂತ್ರಣ ಹೇರಲಾಗಿದ್ದು ಅಂತವರ ವಿರುದ್ದ ಕ್ರಮಕೈಗೊಳ್ಳುತ್ತವೆ ಎಂದರು.
ಈ ಸಂಧರ್ಭದಲ್ಲಿ ಶ್ರೀ ಗುರು ಸುದೀಂದ್ರ ಬಿಬಿಎ, ಬಿಸಿಎ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ರೋಟರಿ ಕ್ಲಬ್ ಭಟ್ಕಳದ ಸದಸ್ಯರು, ಯಲ್ವಡಿಕವೂರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಜಾಕ, ರೋಟರಿ ಕ್ಲಬ್ ಸದಸ್ಯ ನಜೀರ ಖಾಸಿಂಜಿ, ಪ್ರಕಾಶ ನಾಯ್ಕ, ಶಾಕೀರ ಹುಸೇನ್, ಪಿಎಸ್ಐ ಕುಡಗುಂಟಿ ಮುಂತಾದವರು ಪಾಲ್ಗೊಂಡಿದ್ದರು.