ಜನಸಂಖ್ಯೆ ನಿಯಂತ್ರಣ ಅನಿವಾರ್ಯ: ಎಡಿಸಿ ಅನುರಾಧಾ
ಉಡುಪಿ, ಜು.11: ಜಗತ್ತಿನಲ್ಲಿ ಜನಸಂಖ್ಯೆಯು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿದ ಬಳಲುವಂತಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಕಾರಣದಿಂದ ಜನಸಂಖ್ಯೆ ಏರಿಕೆಯನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಹೇಳಿದ್ದಾರೆ
ಉಡುಪಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಬಲಪಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಗಳ ತರಬೇತಿ ಕೇಂದ್ರ, ಅಜ್ಜರಕಾಡು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ಆಯೋಜಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನಸಂಖ್ಯೆ ಹೆಚ್ಚಳದ ಪರಿಣಾಮವಾಗಿ ಮೂಲ ಭೂತ ಅವಶ್ಯಕತೆಗಳಾದ ನೀರು, ವಸತಿ, ಆಹಾರ, ಶಿಕ್ಷಣ, ಆರೋಗ್ಯ ಸೌಲಭ್ಯಗಳ ಕೊರತೆ ಎದುರಾಗಲಿದೆ ಎಂದ ಅವರು, ಇದರ ನಿಯಂತ್ರಣಕ್ಕೆ ಗಂಡು ಹೆಣ್ಣಿನ ಅನುಪಾತ, ಮಕ್ಕಳ ಅಂತರವನ್ನು ಕಾಪಾಡಬೇಕು. ಪ್ರತಿಯೊಬ್ಬರಿಗೆ ಶಿಕ್ಷಣ ಒದಗಿಸಬೇಕು. ಯುವ ಸಮುದಾಯದಲ್ಲಿ ಆ ಕುರಿತು ಅರಿವು ಮೂಡಿಸಬೇಕು ಎಂದರು.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಮಾತನಾಡಿ, ಜಗತ್ತಿನಲ್ಲಿ ಇಂದು ಪ್ರತಿ ನಿಮಿಷಕ್ಕೆ 160 ಮಂದಿ ಹುಟ್ಟುತ್ತಿದ್ದಾರೆ. ವರ್ಷಕ್ಕೆ ಜಗತ್ತಿನ ಜನಸಂಖ್ಯೆಯಲ್ಲಿ 8.4 ಕೋಟಿ ಮಂದಿ ಸೇರ್ಪಡೆಗೊಳ್ಳುತ್ತಿದ್ದಾರೆ. 10 ವರ್ಷಗಳಲ್ಲಿ 100 ಕೋಟಿ ಜನಸಂಖ್ಯೆ ವೃದ್ಧಿಯಾ ಗುತ್ತಿದೆ. ಪ್ರಸ್ತುತ ಇರುವ 720 ಕೋಟಿ ಜನಸಂಖ್ಯೆಯು 2061ಕ್ಕೆ 1,000 ಕೋಟಿಗೆ ಏರಿಕೆಯಾಗಲಿದೆ ಎಂದರು.
ಭಾರತದ ಜನಸಂಖ್ಯೆಯು ಚೀನಾದ ಜನಸಂಖ್ಯೆಗಿಂತ ಐದು ಕೋಟಿ ಕಡಿಮೆ ಇದೆ. ಇದೇ ರೀತಿ ಮುಂದುವರೆದರೆ ಸದ್ಯವೇ ನಾವು ಚೀನಾವನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೆ ಏರಲಿದ್ದೇವೆ. 2011ರಲ್ಲಿ ಉಡುಪಿ ಜಿಲ್ಲೆಯ ಜನಸಂಖ್ಯೆ 11.77 ಲಕ್ಷ ಇದ್ದು, 10 ವರ್ಷಗಳಲ್ಲಿ 56 ಸಾವಿರ ಜನಸಂಖ್ಯೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುರುಷೋತ್ತಮ ಪಿ.ಕೆ. ಕರಪತ್ರವನ್ನು ಬಿಡುಗಡೆಗೊಳಿಸಿ ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಜಿ.ಆರ್.ರಾವ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನಾ ಸ್ವಾಗತಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿ ಡಾ.ರಾಮರಾವ್ ವಂದಿಸಿದರು. ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.