ಕಾಸರಗೋಡು: ಜು.15ರಿಂದ ಸೀತಾಂಗೋಳಿ-ವಿದ್ಯಾನಗರ ಬಸ್ ಸಂಚಾರ ಸ್ಥಗಿತ
ಕಾಸರಗೋಡು, ಜು.13: ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಖಾಸಗಿ ಬಸ್ ಮಾಲಕರು ಮುಂದಾಗಿದ್ದಾರೆ. ಜುಲೈ 15 ರಿಂದ ಸೀತಾಂಗೋಳಿ-ವಿದ್ಯಾನಾಗರ ರಸ್ತೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ರಸ್ತೆಯು ರಸ್ತೆ ಸಂಪೂರ್ಣ ಸಂಚಾರಕ್ಕೆ ಅಯೋಗ್ಯವಾಗಿದ್ದು ರಸ್ತೆಯುದ್ದಕ್ಕೂ ಹೊಂಡಗಳು ಉಂಟಾಗಿವೆ. ಇದರಿಂದ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರೂ ಇದನ್ನು ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಆರೋಪಿಸಿದರು.
ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಹೊಂಡಗಳು ಬಾಯ್ದೆರೆದಿದ್ದು, ಈ ಹಿನ್ನೆಲೆಯಲ್ಲಿ ಜುಲೈ 15 ರಿಂದ ನಗರಸಭೆಗೆ ಪಾವತಿಸುವ ನಿಲ್ದಾಣಶುಲ್ಕವನ್ನು ನೀಡದೆ ಬಹಿಷ್ಕರಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗಿರೀಶ್ ಕುಮಾರ್, ತಾರಾನಾಥ್ ಮಧೂರು, ಹಸೈನಾರ್ ಹಾಜಿ, ಮುಹಮ್ಮದ್ ಕುಂಞಿ, ರಾಧಾಕೃಷ್ಣ ಸೂರ್ಲು ಮೊದಲಾದವರು ಉಪಸ್ಥಿತರಿದ್ದರು.