ಅಚ್ಯುತರಾಯ ಪೂಜಾರಿ
ಬೆಳ್ತಂಗಡಿ, ಜು.13: ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ ಅಚ್ಚುತ ಪೂಜಾರಿ (46) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದರು. ಇವರನ್ನು ಅನಾರೋಗ್ಯದ ನಿಮಿತ್ತ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಮೃತರು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದು ಎರಡನೆ ಬಾರಿ ಪಂಚಾಯತ್ಗೆ ಆಯ್ಕೆಯಾಗಿದ್ದರು. ಬಿಜೆಪಿಯ ಮುಖಂಡರಾದ ಇವರು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಜನಾನುರಾಗಿ ನಾಯಕರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು.
ಇವರು ನೇತ್ರದಾನ ಮಾಡುವ ಮೂಲಕ ನೇತ್ರದಾನ ಮಾಡುವಂತೆ ಪ್ರೇರಣೆ ನೀಡಿದ್ದರು. ಮೃತರು ಸಹೋದರ ಗ್ರಾ.ಪಂ. ಸದಸ್ಯ ಪ್ರಭಾಕರ ಪೂಜಾರಿ ಸೇರಿದಂತೆ ಪತ್ನಿ, ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಮನೆಗೆ ಶಾಸಕ ಕೆ. ವಸಂತ ಬಂಗೇರ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಉದ್ಯಮಿ ಹರೀಶ್ ಪೂಂಜ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹಾಗೂ ಅನೇಕ ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಮೃತರ ಸ್ಮರಣಾರ್ಥ ಕನ್ಯಾಡಿ ಹಾಗೂ ಧರ್ಮಸ್ಥಳದ ವಾಹನ ಚಾಲಕರು ಮತ್ತು ಅಂಗಡಿ ಮಾಲಕರು ಸಂಪೂರ್ಣ ಬಂದ್ ಮಾಡಿ ಗೌರವ ಸಲ್ಲಿಸಿದರು.