ಎಸ್ವಿಟಿಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಕಾರ್ಕಳ, ಜು.14: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇಡಿಕೆ ಇರುವುದು ಶಿಕ್ಷಣ, ಕೋರ್ಸಿಗೆ ಅಲ್ಲ, ವ್ಯಕ್ತಿಗೆ. ಉದ್ಯೋಗ ರಂಗಕ್ಕೆ ಹೋದಾಗ ಈ ವ್ಯಕ್ತಿ ನಮಗೆ ಆಗಬಹುದು ಎನ್ನುವಂತೆ ನಮ್ಮ ಬದುಕಿಗೆ ಬೇಕಾದ ಕೌಶಲಗಳನ್ನು ಬೆಳೆಸಿಕೊಂಡು ನಮ್ಮ ವ್ಯಕ್ತಿತ್ವವನ್ನು ನಾವು ರೂಪಿಸಿಕೊಳ್ಳಬೇಕು ಎಂದು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಶ್ರೀವರ್ಮ ಅಜ್ರಿ ಹೇಳಿದ್ದಾರೆ.
ಅವರು ಎಸ್ವಿಟಿ ವನಿತಾ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ, ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಎಸ್.ವಿ.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಪಿ.ಶೆಣೈ ವಿದ್ಯಾರ್ಥಿ ಭಿತ್ತಿ ಪತ್ರಿಕೆ ನೇಸರವನ್ನು ಅನಾವರಣಗೊಳಿಸಿ, ವಿದ್ಯಾರ್ಥಿಗಳಲ್ಲಿರುವ ನಿಜವಾದ ಪ್ರತಿಭೆ ಅಭಿವ್ಯಕ್ತಗೊಳ್ಳಬೇಕು. ಗಳಿಸಿದ ಜ್ಞಾನವು ಅಂಕಗಳಿಗೆ ಮಾತ್ರ ಸೀಮಿತವಾಗಿರದೆ ಜೀವನದಲ್ಲಿ ಬದುಕುವ ಕಲೆಯನ್ನು ಕಲಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ರಾಮದಾಸ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. 2015-16ನೆ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನೀತಾ ಶೆಣೈ ಸ್ವಾಗತಿಸಿದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಸಿ.ಕೆ. ಪರಿಚಯಿಸಿದರು. ಉಪಾಧ್ಯಕ್ಷ ಕುಮಾರ್ ರತೇಶ್ ಶೆಟ್ಟಿ ವಂದಿಸಿದರು.