ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಶೀಘ್ರ ಪ್ರಾರಂಭ: ಶಾಸಕ ಅಂಗಾರ
ಕಡಬ, ಜು.15. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಗಡಿ ಭಾಗವಾದ ಕೆಮ್ಮಾರದಿಂದ ಮರ್ಧಾಳ ತನಕ ಅಗಲೀಕರಣ ಮಾಡುವ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ತಿಳಿಸಿದ್ದಾರೆ.
ರಸ್ತೆ ಅಗಲೀಕರಣಕ್ಕಾಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳ ಅಡಿಯಲ್ಲಿ 21.05 ಕೋಟಿ ರೂ. ಬಿಡುಗಡೆಯಾಗಿದ್ದು, ಕೆಮ್ಮಾರದಿಂದ ಮರ್ಧಾಳದವರೆಗೆ ಅಗಲೀಕರಣ ನಡೆಯಲಿದೆ ಎಂದಿದ್ದಾರೆ. ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮಗಿದು ಬಾಲ್ರಾಜ್ ಎಂಬವರಿಗೆ ಟೆಂಡರ್ ಖಾಯಂ ಆಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿರುವಾಗ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿತ್ತು. ಆ ಬಳಿಕ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿತ್ತು. ರಸ್ತೆಯಲ್ಲಿ ಬರುವ ನೆಟ್ಟಣ ಹಾಗೂ ಬಜಕೆರೆಯಲ್ಲಿ ಶಾಶ್ವತ ಸೇತುವೆಯನ್ನು ನಿರ್ಮಿಸಲಾಗಿದೆ.
ಅಂತೆಯೇ ಸುಬ್ರಹ್ಮಣ್ಯ ಹಾಗೂ ಹೊಸಮಠದಲ್ಲಿನ ಮುಳುಗು ಸೇತುವೆಗೆ ಪರ್ಯಾಯವಾಗಿ ಶಾಶ್ವತ ಸೇತುವೆಯನ್ನು ನಿರ್ಮಾಣ ಮಾಡಲು ಅನುದಾನ ಮಂಜೂರುಗೊಳಿಸಲಾಗಿತ್ತು. ಇವುಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದೇ ವೇಳೆ ಶಾಂತಿಮುಗೇರು ಬೃಹತ್ ಸೇತುವೆಗೂ ಅನುದಾನ ಮಂಜೂರು ಮಾಡಲಾಗಿತ್ತು. ಈ ಸೇತುವೆಯ ಕಾರ್ಯ ಭರದಿಂದ ಸಾಗಿದ್ದು ಮಳೆಗಾಲ ಮಗಿದ ಬಳಿಕ ಮತ್ತೆ ಬಿರುಸಿನಿಂದ ಸಾಗಲಿದೆ. ಸೇತುವೆ ಬಳಿಯಿಂದ ಆಲಂಕಾರು ತನಕ ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ.
ಮರ್ಧಾಳ-ಪೆರಿಯಶಾಂತಿ ರಸ್ತೆಯನ್ನೂ ಅಭಿವೃದ್ಧಿ ಪಡಿಸಲಾಗಿದೆ. ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯನ್ನೂ ಅಭಿವೃದ್ಧಿಪಡಿಸಲಾಗಿದೆ. ಕ್ಷೇತ್ರದ ಮುಖ್ಯ ರಸ್ತೆಗಳನ್ನೆಲ್ಲಾ ಈಗಾಗಲೇ ಅಭಿವೃದ್ಧಿ ಪಡಿಸಿ ಜನರ ಉಪಯೋಗಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿರುವ ಅಂಗಾರ ಇದೀಗ ಹೆದ್ದಾರಿ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕಾಮಗಾರಿ ನಡೆಸುವ ವೇಳೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.