ಅತ್ಯಾಚಾರಗೈದು ಕೊಲೆಯತ್ನ: ಅಪರಾಧ ಸಾಬೀತು
ಜು. 19ರಂದು ಶಿಕ್ಷೆ ಪ್ರಕಟ ಸಾಧ್ಯತೆ
ಮಂಗಳೂರು, ಜು.16: ಅತ್ಯಾಚಾರಗೈದು ನದಿಗೆ ತಳ್ಳಿ ಕೊಲೆಗೆ ಯತ್ನಿಸಿದ್ದ ಬೆಳ್ತಂಗಡಿ ಹತ್ಯಡ್ಕ ಗ್ರಾಮದ ಪುಂಡಾಜೆ ನಿವಾಸಿ ಆನಂದ (23) ಎಂಬಾತನ ಅಪರಾಧವು ನಗರದ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಜುಲೈ 19 ರಂದು ಶಿಕ್ಷೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಬೆಳ್ತಂಗಡಿ ರೆಖ್ಯಾ ಗ್ರಾಮದ ನಿವಾಸಿ 19 ವರ್ಷದ ಯುವತಿಯನ್ನು ಈತ 2014 ಮಾರ್ಚ್ 2 ರಂದು ಮದುವೆಯಾಗುವುದಾಗಿ ಹೇಳಿ ಆಕೆಯ ಮೇಲೆ ಮೊದಲ ಬಾರಿ ಅತ್ಯಾಚಾರ ನಡೆಸಿ ಅನಂತರ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗುವಂತೆ ಮಾಡಿದ್ದ. ಆನಂದನನ್ನು ಯುವತಿ ಮದುವೆಯಾಗಲು ಒತ್ತಾಯಿಸಿದ್ದಳು. ಅಬಾರ್ಷನ್ ಮಾಡಿಸಲು ಉಪ್ಪಿನಂಗಡಿಗೆ ಬರುವಂತೆ ಆನಂದ ಯುವತಿಯನ್ನು ಕರೆದಿದ್ದ. ಅದರಂತೆ ಯುವತಿ 2014 ಸೆ.8 ರಂದು ಉಪ್ಪಿನಂಗಡಿಗೆ ಬಂದಾಗ ಸುಬ್ರಹ್ಮಣ್ಯದಲ್ಲಿ ಅಬಾರ್ಷನ್ ಮಾಡಿಸುವ ಎಂದು ಹೇಳಿ ಆಕೆಯನ್ನು ಬೈಕ್ನಲ್ಲಿ ಕರೆದೊಯ್ದು ಸಂಜೆ 7:30ರ ಸುಮಾರಿಗೆ ಪುಳಿ ಕುಕ್ಕು ಸೇತುವೆ ಬಳಿ ಬೈಕ್ ಹಾಳಾಯಿತು ಎಂದು ನೆಪ ಹೇಳಿ ಆಕೆಯನ್ನು ಎತ್ತಿ ನದಿಗೆ ಹಾಕಿ ಅಲ್ಲಿಂದ ಪರಾರಿಯಾಗಿದ್ದ.
ಈ ಸಂದರ್ಭದಲ್ಲಿ 6 ತಿಂಗಳ ಗರ್ಭಿಣಿಯಾಗಿದ್ದ ಯುವತಿ ನದಿಯಲ್ಲಿ 2 ಕಿ.ಮೀ. ಈಜಿಕೊಂಡು ಹೋಗಿದ್ದಾಳೆ. ಪಾಳೋಳಿ ಎಂಬಲ್ಲಿ ನದಿ ಮಧ್ಯೆ ಸಿಕ್ಕಿದ ಗಿಡವೊಂದನ್ನು ಹಿಡಿದುಕೊಂಡು ಬೆಳಗ್ಗೆ ತನಕ ಕಾಲ ಕಳೆದಿದ್ದಾಳೆ. ಯುವತಿಯ ಬೊಬ್ಬೆ ಕೇಳಿ ಬೆಳಗ್ಗೆ ತೆಪ್ಪದವರು ಬಂದು ಆಕೆಯನ್ನು ರಕ್ಷಿಸಿದ್ದಾರೆ. ಅಲ್ಲಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಕಡಬ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಸೆ.10 ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಸಂಬಂಧ ಕಡಬ ಠಾಣೆಯ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ ಅತ್ಯಾಚಾರ ಹಾಗೂ ಕೊಲೆಯತ್ನ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿ ವಿಚಾರಣೆ ಸಂದರ್ಭ ಆರೋಪಿ ನ್ಯಾಯಾಲಯದಲ್ಲಿ ಯುವತಿಯನ್ನು ಭೇಟಿಯಾದಾಗ ತಾನು ನಿನ್ನನ್ನು ಮದುವೆಯಾಗುತ್ತೇನೆ. ಪ್ರತಿಕೂಲ ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದ. ಈ ಪ್ರಕಾರ ಯುವತಿ ಒಪ್ಪಿಗೆಯಿಂದ ದೈಹಿಕ ಸಂಪರ್ಕ ನಡೆಸಿದ್ದೆವು. ನದಿಗೆ ಜಾರಿ ಬಿದ್ದಿದ್ದೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಳು. ಸರಕಾರಿ ಅಭಿಯೋಜಕರ ಪಾಟೀ ಸವಾಲಿನಲ್ಲಿ ಸುಳ್ಳು ಹೇಳಿಕೆ ನೀಡಿರುವುದನ್ನು ಒಪ್ಪಿಕೊಂಡಿದ್ದಳು. ಯುವತಿಯನ್ನು ರಕ್ಷಿಸಿದವರು, ಆಕೆಗೆ ಚಿಕಿತ್ಸೆ ನೀಡಿದ್ದ ಕಡಬ ಹಾಗೂ ಪುತ್ತೂರಿನ ವೈದ್ಯರೂ ಸಾಕ್ಷಿ ಹೇಳಿದ್ದರು. ಆನಂದ ನ್ಯಾಯಾಂಗ ಬಂಧನದಲ್ಲಿದ್ದು, ಸಂತ್ರಸ್ತೆ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.