ಮಂಚಿ ಸರಕಾರಿ ಶಾಲಾ ಮಕ್ಕಳ ಕೊಲಾಜ್ ಚಿತ್ರಪಯಣ
ಕೊಲಾಜ್ ಮಾಧ್ಯಮದ ಜಾಗೃತಿಗೆ ರಾಜ್ಯದಲ್ಲೇ ಮೊದಲ ಪ್ರಯತ್ನ
ಕರ್ನಾಟಕ ರಾಜ್ಯದಲ್ಲೇ ಮೊದಲ ಪ್ರಯತ್ನವೆಂಬಂತೆ ಬಹಳ ಅಪರೂಪವೂ ವೈಶಿಷ್ಟ್ಯವೂ ಆಗಿರುವ ‘ಕೊಲಾಜ್’ ಮಾಧ್ಯಮವನ್ನು ಆಯ್ದುಕೊಳ್ಳುವ ಮೂಲಕ ಚಿತ್ರಪಯಣ ಆರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ-ಕೊಳ್ನಾಡು ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ನಗರ, ಹಳ್ಳಿಗಳ ಜನರಲ್ಲಿ ಕಲಾಜಾಗೃತಿ, ಕಲಾಪ್ರಜ್ಞೆಯನ್ನು ಮೂಡಿಸ ಹೊರಟಿದ್ದಾರೆ. ‘ಕೊಲಾಜ್’ ಚಿತ್ರ ಮಾಧ್ಯಮದಲ್ಲೊಂದು ವಿಶೇಷ ಪ್ರಯೋಗ. ಓದಿ ಬಿಸಾಡಿದ ಹಳೆ ಮ್ಯಾಗಝಿನ್ಗಳ ಬಣ್ಣದ ಕಾಗದಗಳನ್ನು ಕತ್ತರಿಸಿದ ತುಂಡುಗಳನ್ನು ಅಂಟಿಸಿ ಕಲಾಕೃತಿಯಾಗಿಸುವುದೇ ಕೊಲಾಜ್ನ ವೈಶಿಷ್ಟ್ಯ.
ಕಲಾಕಾರನ ನೈಪುಣ್ಯವನ್ನಾಧರಿಸಿ ರಚನೆಯಾಗುವ ಕಲಾಕೃತಿಗಳು ತಾಳ್ಮೆ, ಸಹನೆಗೆ ಸವಾಲಾಗಿ ಅವಕಾಶದಲ್ಲಿ ಸೃಷ್ಟಿಯಾಗುತ್ತದೆ. ಇಲ್ಲಿ ಕಲಾವಿದ ಆಯ್ದುಕೊಳ್ಳುವ ಕಲಾವಸ್ತುಗಳು ಯಾವುದೇ ಇರಲಿ ಬುದ್ಧಿವಂತಿಕೆ ಮತ್ತು ತಾಂತ್ರಿಕತೆ ಮಹತ್ವವೆನಿಸುತ್ತದೆ. ಒಟ್ಟು ಚಿಂತನೆಗೆ ಒತ್ತುಕೊಟ್ಟು ಪ್ರಸ್ತುತವಾಗುವ ರಚನೆಗಳು ವೀಕ್ಷಕರನ್ನು ಸ್ತಬ್ಧಗೊಳಿಸುತ್ತದೆ. ‘ಕೊಲಾಜ್’ ಎಂಬುದು ಗ್ರೀಕ್ ಪದವಾಗಿದ್ದು ಕತ್ತರಿಸು-ಅಂಟಿಸು ಎಂದರ್ಥವಾಗಿದೆ. ‘ಕೊಲಾಜ್’ ಚಿತ್ರ ಮಾಧ್ಯಮದಲ್ಲಿ ಬಣ್ಣಗಳನ್ನು ಹಚ್ಚಬಹುದಾರೂ ಮಂಚಿ ಪ್ರೌಢ ಶಾಲೆಯ ಮಕ್ಕಳು ಚಿತ್ರಿಸಿರುವ ಕೊಲಾಜ್ ಸಂಪೂರ್ಣ ಪೆಯಿಂಟಿಂಗ್ ರಹಿತವಾಗಿದೆ. ಇದು ಮಂಚಿ-ಕೊಳ್ನಾಡು ಹಳ್ಳಿಯ ಮಕ್ಕಳ ಇನ್ನೊಂದು ಸಾಧನೆಯೂ ಹೌದು. ಹಳೆ ಮ್ಯಾಗಝಿನ್ಗಳ ಬಣ್ಣದ ಕಾಗದಗಳನ್ನು ಕಲಾವಿದ ವಿದ್ಯಾರ್ಥಿಗಳು ಆಯ್ದುಕೊಂಡಿರುವ ಕಲಾಕೃತಿಗಳಿಗೆ ತಕ್ಕಂತೆ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಅಂಟಿಸಿ ಕಲಾಕೃತಿ ರಚನೆ ಮಾಡಲಾಗಿದೆ. ಬಣ್ಣ ಹಾಗೂ ಆಯಿಲ್ ಪೆಯಿಂಟ್ ಮಾಧ್ಯಮವು ಆರ್ಥಿಕವಾಗಿ ದುಬಾರಿಯಾದರೆ ಕೊಲಾಜ್ ಮಾಧ್ಯಮ ಕಡಿಮೆ ಖರ್ಚಿನಲ್ಲಿ ರಚಿಸಬಹುದು.
ಹಾಗಾಗಿ ಆರ್ಥಿಕವಾಗಿ ಹಿಂದುಳಿದ ಹಳ್ಳಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಕೊಲಾಜ್ ಚಿತ್ರ ಮಾಧ್ಯಮ ಉತ್ತಮ ಅವಕಾಶವಾಗಿದೆ. ಮಂಚಿ ಸರಕಾರಿ ಪ್ರೌಢ ಶಾಲೆಯ ಮಕ್ಕಳಲ್ಲಿ ‘ಕೊಲಾಜ್’ ಚಿತ್ರ ಮಾಧ್ಯಮದ ಕುರಿತು ಆಸಕ್ತಿ ಮೂಡಿಸಿದವರು ಶಾಲೆಯ ಕಲಾ ಅಧ್ಯಾಪಕ ತಾರಾನಾಥ ಕೈರಂಗಳ. ಕಳೆದ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಶಾಲೆಗೆ ಕರೆದು ‘ಕೊಲಾಜ್’ ಚಿತ್ರಗಳ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳು ಕೂಡಾ ಬೇಸಿಗೆ ರಜೆಯನ್ನು ಮೋಜಿನಲ್ಲಿ ಕಳೆಯುವ ಬದಲು ‘ಕೊಲಾಜ್’ಗೆ ಆಕರ್ಷಿತರಾಗಿ ಕಠಿಣ ತರಬೇತಿ ಪಡೆದಿದ್ದಾರೆ.
ಕಲಾ ಅಧ್ಯಾಪಕನ ಕನಸಿಗೆ ಹಾಗೂ ವಿದ್ಯಾರ್ಥಿಗಳ ಉತ್ಸಾಹಕ್ಕೆ ಬೆನ್ನೆಲುಬಾಗಿ ನಿಂತವರು ಶಾಲಾ ಮುಖ್ಯ ಶಿಕ್ಷಕ. ಅನೌಪಚಾರಿಕವಾಗಿ ಕಲಾಶಿಕ್ಷಣವನ್ನು ಪಠ್ಯದ ಜೊತೆ ಕಲಿತುಕೊಂಡು ವೃತ್ತಿಪರ ಕಲಾವಿದರಂತೆ ಕಲಾಕೃತಿಗಳನ್ನು ರಚಿಸಿ ಕಲಾವಲಯದಲ್ಲಿ ತಮ್ಮ ಛಾಪನ್ನು ಮೂಡಿಸಲು ಹೊರಟಿರುವ ಮಂಚಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಅಮೋಘ. ಕ್ಲಿಷ್ಟಕರವಾದ ತಂತ್ರಗಾರಿಕೆಯನ್ನು ಬಳಸಿಕೊಂಡು ಜನಪ್ರಶಂಸೆಗೆ ಕಾಯುವ ವಿದ್ಯಾರ್ಥಿಗಳ ತುಡಿತ ಪ್ರಶಂಸನೀಯ. ಹಳ್ಳಿಯ ಸೊಗಡನ್ನು ಮೈಗೂಡಿಸಿಕೊಂಡಿರುವ ಮುಗ್ಧ ಹೃದಯಗಳ ಭಾವನಾತ್ಮಕ ಪುಟಾಣಿಗಳು ಯಾವುದೇ ನಿರೀಕ್ಷೆಗಳ ಹಂಗಿಲ್ಲದೆ ಕಲಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಬೇಸಿಗೆ ರಜೆಯಲ್ಲಿ ಕಲಾ ಶಿಕ್ಷಕ ತಾರಾನಾಥ ಕೈರಂಗಳರವರಿಂದ ತರಬೇತಿ ಪಡೆದ ಮಂಚಿ ಸರಕಾರಿ ಪ್ರೌಢ ಶಾಲೆಯ ಮಕ್ಕಳು ಚಿತ್ರಿಸಿರುವ ಚಿತ್ರಗಳಲ್ಲಿ ಆಯ್ದ 25 ಚಿತ್ರಗಳನ್ನು ಪ್ರಥಮ ಪ್ರಯೋಗವಾಗಿ ಜೂನ್ ತಿಂಗಳ ಮೊದಲ ವಾರ ಮಂಗಳೂರು ನಗರದ ಆರ್ಟ್ ಗ್ಯಾಲರಿಯೊಂದರಲ್ಲಿ ಪ್ರದರ್ಶನಕ್ಕಿಡಲಾಗಿತ್ತು.
ಪ್ರದರ್ಶನದಲ್ಲಿ ಕಲಾ ಭಿಮಾನಿಗಳಿಂದ ಭಾರೀ ಪ್ರಶಂಸೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೂ ‘ಕೊಲಾಜ್’ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಸಲುವಾಗಿ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘ ಬಿಸಿರೋಡಿನ ಪ್ರೆಸ್ಕ್ಲಬ್ನಲ್ಲಿ ಮೂರು ದಿನಗಳ ಕಾಲ ಕೊಲಾಜ್ ಚಿತ್ರಗಳ ಪ್ರದರ್ಶನಕ್ಕೆ ಮಂಚಿ ಶಾಲೆಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಇಲ್ಲಿಯೂ ಕಲಾಭಿಮಾನಿಗಳಿಂದ ಭಾರೀ ಪ್ರಸಂಶೆ ವ್ಯಕ್ತವಾಗುವಂತೆ ಮಾಡಿದ ಪ್ರತೀಯೊಂದು ಕೊಲಾಜ್ ಚಿತ್ರವು ವೀಕ್ಷಕರನ್ನು ಬೆರಗಾಗುವಂತೆ ಮಂಚಿ ಶಾಲೆಯ ಮಕ್ಕಳು ಮಾಡಿದ್ದಾರೆ.
ಮಕ್ಕಳ ಈ ಅಮೋಘ ಸಾಧನೆಯ ರೂವಾರಿ ಶಾಲೆಯ ಕಲಾಧ್ಯಾಪಕ ತಾರಾನಾಥ್ ಕೈರಂಗಳರವರೇ ಹೇಳುವಂತೆ, ಚಿಕ್ಕ ವಯಸ್ಸಿನಲ್ಲಿಯೇ ಚಿತ್ರಕಲೆಯಲ್ಲಿ ತೊಡಗಿಕೊಂಡಿರುವ ನಾನು ನೋಡಿದಂತೆ ‘ಕೊಲಾಜ್’ ಚಿತ್ರಗಳ ಪ್ರದರ್ಶನ ರಾಜ್ಯದಲ್ಲೇ ಇದು ಪ್ರಪ್ರಥಮವಾಗಿದೆ. ಅದರಲ್ಲೂ ಹಳ್ಳಿಯ ಸರಕಾರಿ ಶಾಲೆಯೊಂದರ ವಿದ್ಯಾರ್ಥಿಗಳು 25 ಚಿತ್ರಗಳನ್ನು ರಚಿಸಿ ‘ಕೊಲಾಜ್’ ಮಾಧ್ಯಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕರ ಪ್ರದರ್ಶನಕ್ಕಿಟ್ಟ ಉದಾಹರಣೆ ದೇಶದಲ್ಲೇ ಪ್ರಥಮವೆಂದೂ ಹೇಳಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.