8100 ಸುಸ್ತಿದಾರರಿಂದ ಬ್ಯಾಂಕ್ಗಳಿಗೆ 76,875 ಕೋಟಿ ರೂ. ಪಂಗನಾಮ
ಹೊಸದಿಲ್ಲಿ, ಜು.19: ದೇಶದಲ್ಲಿ 8167 ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸದ ಸುಸ್ತಿದಾರರಿದ್ದು, ಅವರು ವಿವಿಧ ಬ್ಯಾಂಕ್ಗಳಿಗೆ 76,685 ಕೋಟಿ ರೂ. ಪಾವತಿಸದೆ ಬಾಕಿಯಿರಿಸಿದ್ದಾರೆ ಎಂದು ಕೇಂದ್ರ ಸರಕಾರ ಮಂಗಳವಾರ ಬಹಿರಂಗಪಡಿಸಿದೆ. ಈ ಸಂಬಂಧ ಈಗಾಗಲೇ 1712 ಎಫ್ಐಆರ್ಗಳನ್ನು ದಾಖಲಿಸಲಾಗಿದೆಯೆಂದು ಅದು ತಿಳಿಸಿದೆ.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸದನಕ್ಕೆ ಈ ಮಾಹಿತಿ ನೀಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಸಾಲಸುಸ್ತಿ ಸನ್ನಿವೇಶಗಳಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಬ್ಯಾಂಕ್ಗಳನ್ನು ಸಬಲೀಕರಣಗೊಳಿಸಲು ಸಾಲ ವಸೂಲಿ ವಿಧೇಯಕವೊಂದನ್ನು ಸರಕಾರ ರೂಪಿಸಿದೆಯೆಂದು ಹೇಳಿದರು. ಪ್ರಸ್ತುತ ಈ ವಿಧೇಯಕವನ್ನು ಸಂಸದೀಯ ಜಂಟಿ ಸಮಿತಿಯು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಸಾಲ ಮರುವಸೂಲಿ ನ್ಯಾಯಾಧೀಕರಣದ ಅನೇಕ ಹುದ್ದೆಗಳು ಪ್ರಸ್ತುತ ಖಾಲಿ ಬಿದ್ದಿರುವ ಬಗ್ಗೆ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಪ್ರಸ್ತಾಪಿಸಿದ ಸಂದರ್ಭದಲ್ಲಿ ಜೇಟ್ಲಿ ಈ ಮಾಹಿತಿ ನೀಡಿದರು.
ಸಾಲಮರುವಸೂಲಿ ನ್ಯಾಯಾಧೀಕರಣದ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಸರಕಾರವು ಪರಿಶೀಲಿಸುತ್ತಿರುವುದಾಗಿ ತಿಳಿಸಿದರು. ನ್ಯಾಯಾಧೀಕರಣದ ಖಾಲಿ ಬಿದ್ದಿರುವ ಹಲವಾರು ಹುದ್ದೆಗಳನ್ನು ರ್ತಿಗೊಳಿಸಲು ಹಲವಾರು ಅಧಿಸೂಚನೆಗಳನ್ನು ಹೊರಡಿಸಿರುವುದಾಗಿಯೂ ಅವರು ತಿಳಿಸಿದರು.
ಬ್ಯಾಂಕ್ ಸಾಲ ಸುಸ್ತಿ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿರುವ ಬಗ್ಗೆ ದಿಗ್ವಿಜಯ್ಸಿಂಗ್ ಕಳವಳ ವ್ಯಕ್ತಪಡಿಸಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ಜೇಟ್ಲಿ 2015-16ನೆ ಸಾಲಿನಲ್ಲಿ ಕೇವಲ ಶೇ.1.14 ಮಂದಿ ಸುಸ್ತಿದಾರರಷ್ಟೇ ಶಿಕ್ಷೆಯಾಗಿದೆಯೆಂದು ತಿಳಿಸಿದರು.