ನಾಡದೋಣಿ ಮಗುಚಿ ಮೀನುಗಾರ ಮೃತ್ಯು
ಮಲ್ಪೆ, ಜು.19: ಇಲ್ಲಿಗೆ ಸಮೀಪದ ತೊಟ್ಟಂನ ಕದಿಕೆಯ ಸಮುದ್ರದಲ್ಲಿ ನಾಡದೋಣಿಯೊಂದು ಮಂಗಳವಾರ ಬೆಳಗ್ಗೆ 6 ಗಂಟೆಗೆ ಮಗುಚಿ ಬಿದ್ದ ಪರಿಣಾಮ ಓರ್ವ ಮೀನುಗಾರ ಮೃತಪಟ್ಟಿದ್ದು, ಏಳು ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮೃತರನ್ನು ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ಅಣ್ಣಯ್ಯ ಸುವರ್ಣ(60) ಎಂದು ಗುರುತಿಸಲಾಗಿದೆ. ಇವರು ಜನಾರ್ದನ ತಿಂಗಳಾಯ ಎಂಬವರ ನಾಡದೋಣಿಯಲ್ಲಿ ಒಟ್ಟು ಎಂಟು ಮಂದಿಯೊಂದಿಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋಗಿದ್ದು, ಅಲ್ಲಿ ಬಲೆ ಬೀಸುತ್ತಿದ್ದಾಗ ಭಾರೀ ಅಲೆಗೆ ದೋಣಿ ಸಿಲುಕಿ ನೀರಿನಲ್ಲಿ ಮಗುಚಿ ಬಿತ್ತೆನ್ನಲಾಗಿದೆ.
ಇದರಿಂದ ಸಮುದ್ರದಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅಣ್ಣಯ್ಯ ಸುವರ್ಣ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಉಳಿದಂತೆ ದೋಣಿಯಲ್ಲಿದ್ದ ಜನಾರ್ದನ ತಿಂಗಳಾಯ, ಸುರೇಶ್, ರಮೇಶ್ ಸಹಿತ ಏಳು ಮಂದಿ ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story