ರಾವ್ ಆಂಡ್ ರಾವ್ ಸರ್ಕಲ್ ಬಳಿ ಒಳಚರಂಡಿ ಕಾಮಗಾರಿ ಅಪೂರ್ಣ: ಸಿಪಿಎಂ ಪ್ರತಿಭಟನೆ
ಮಂಗಳೂರು, ಜು.21; ನಗರದ ರಾವ್ ಆಂಡ್ ರಾವ್ ಸರ್ಕಲ್ ಬಳಿ ರಸ್ತೆಯನ್ನು ಅಗೆದು ಒಳಚರಂಡಿ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿರುವುದನ್ನು ವಿರೋಧಿಸಿ ಇಂದು ರಾವ್ ಆಂಡ್ ರಾವ್ ಸರ್ಕಲ್ ಬಳಿ ಸಿಪಿಎಂ ನಗರ ಕೇಂದ್ರ ವಿಭಾಗ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಅವರು ನಿರ್ಮಿತಿ ಕೇಂದ್ರಕ್ಕೆ ಕಾಮಾಗಾರಿ ನಡೆಸಲು ನಿರ್ದೇಶನ ನೀಡಿ ರಸ್ತೆಯನ್ನು ಅರ್ಧದಲ್ಲಿ ಅಗೆಸಿ ಕೆಲಸ ಮುಂದುವರೆಸದಂತೆ ಸೂಚಿಸಲಾಗಿದೆ. ಈ ಬಗ್ಗೆ ಈ ಪ್ರದೇಶದ ಮೂರು ಕಾರ್ಪೋರೇಟರ್ ಗಳಿಗೂ ಮಾಹಿತಿಯಿಲ್ಲ. ಜನ ಪ್ರತಿನಿಧಿಗಳನ್ನು ಕತ್ತಲೆ ಕೋಣೆಯಲ್ಲಿಟ್ಟು ಅಧಿಕಾರಿಗಳು ಕಮೀಷನ್ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಒಂದು ವಾರದಲ್ಲಿ ಕೆಲಸ ಆರಂಭಿಸುವ ಭರವಸೆ ನೀಡಿದ್ದು , ಕೆಲಸ ಆರಂಭಿಸದಿದ್ದರೆ ತೀವ್ರ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮನಪಾ ಇಂಜಿನಿಯರ್ ಯಶವಂತಕುಮಾರ್ ಮನವಿಯನ್ನು ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ವಾಸುದೇವ್ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು