ಮೆಸ್ಕಾಂ ಕೂಳೂರು ವಿಭಾಗದಲ್ಲಿ ಪ್ರತ್ಯೇಕ ಸೇವಾಕೇಂದ್ರ ತೆರೆಯಲು ಡಿವೈಎಫ್ಐ ಒತ್ತಾಯ
ಮಂಗಳೂರು, ಜು.21: ಕೂಳೂರು ವಿಭಾಗದಲ್ಲಿ ಮೆಸ್ಕಾಂ ವಿಭಾಗದಲ್ಲಿ ಮಳೆಗಾಲದ ಕಾರ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಇರುವ ಒಂದು ಸೇವಾಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು ಪ್ರತ್ಯೇಕ ಸೇವಾಕೇಂದ್ರವನ್ನು ತೆರೆಯಬೇಕೆಂದು ಒತ್ತಾಯಿಸಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಡಿವೈಎಫ್ಐ ಪಂಜಿಮೊಗರು ಘಟಕದ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಕಾವೂರು ಮೆಸ್ಕಾಂ ವ್ಯಾಪ್ತಿ ದೊಡ್ಡದಾಗಿದ್ದು ಕೂಳೂರಿನಲ್ಲಿ ಪ್ರತ್ಯೇಕ ಸೇವಾಕೇಂದ್ರ ನಿರ್ಮಿಸಬೇಕೆಂಬ ಒತ್ತಾಯ ಹಲವಾರು ವರ್ಷಗಳಿಂದ ಇದ್ದರೂ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ಸಿಬ್ಬಂದಿ ಕೊರತೆಯಿಂದಾಗಿ ಮೆಸ್ಕಾಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಗ್ರಾಹಕರ ದೂರುಗಳಿಗೆ ಸರಿಯಾದ ಸ್ಪಂದನೆ ದೊರಕುತ್ತಿಲ್ಲ. ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸಲು ನಿರ್ಲಕ್ಷ್ಯ ವಹಿಸಿರುವ ಮೆಸ್ಕಾಂ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇನ್ನೊಂದೆಡೆ ಮಳೆಗಾಲದ ಸಂದರ್ಭದಲ್ಲಿ ಸಣ್ಣ ಗಾಳಿ ಮಳೆಗೂ ತಂತಿಗಳು ಪರಸ್ಪರ ತಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆಗಾಲದ ಸಂದರ್ಭ ಟ್ರೀ ಕಟ್ಟಿಂಗ್ ಮಾಡುವುದನ್ನೂ ಮೆಸ್ಕಾಂ ಮರೆತಿದೆ. ಇಂತಹ ಮುಂಜಾಗ್ರತಾ ಕ್ರಮಗಳನ್ನು ನಿರ್ಲಕ್ಷಿಸಿರುವ ಮೆಸ್ಕಾಂ ತನ್ನ ಬೇಜವಾಬ್ದಾರಿಯಿಂದಲೇ ಸಮಸ್ಯೆಗಳನ್ನು ಸೃಷ್ಟಿಸಿದೆ. ಇತ್ತೀಚೆಗೆ ಗಾಳಿ ಮಳೆಗೆ ವಿದ್ಯುತ್ ಟ್ತಾನ್ಸ್ ಫಾರ್ಮರ್ ಹೊತ್ತಿ ಉರಿದಿದ್ದು ಅದನ್ನು ಸರಿಪಡಿಸಲು ವಾರ ಕಾಲ ವಿಳಂಬ ಮಡಿದ ಪರಿಣಾಮ ಪ್ರದೇಶದಲ್ಲಿ ದಾರಿ ದೀಪಗಳಿರಲಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ದುರಸ್ತಿ ಮಾಡಲು ಸರಿಯಾದ ಸಿಬ್ಬಂದಿ ಕೊರತೆಯಿದ್ದು ಪ್ರತ್ಯೇಕ ಸೇವಾಕೇಂದ್ರ ಸ್ಥಾಪನೆಯೇ ಇದಕ್ಕೆ ಸೂಕ್ತ ಪರಿಹಾರವಾಗಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿರುವ ಡಿವೈಎಫ್ಐ ತಪ್ಪಿದ್ದಲ್ಲಿ ಮೆಸ್ಕಾಂ ಗ್ರಾಹಕರನ್ನು ಒಟ್ಟು ಸೇರಿಸಿ ನಿರಂತರ ಹೋರಾಟ ಸಂಘಟಿಸುವ ಎಚ್ಚರಿಕೆಯನ್ನು ಡಿವೈಎಫ್ಐ ಪಂಜಿಮೊಗರು ಘಟಕ ನೀಡಿದೆ.
ನಿಯೋಗದಲ್ಲಿ ಡಿ.ವೈ.ಎಫ್.ಐ ಪಂಜಿಮೊಗರು ಘಟಕ ಅಧ್ಯಕ್ಷ ಅನಿಲ್ ಡಿಸೋಜ, ಚರಣ್ ಶೆಟ್ಟಿ, ನೌಶಾದ್ ಬಾವ, ಶಕೀರ್ ಇದ್ದರು.