ಮಾಯಾವತಿ ವಿರುದ್ಧದ ಟೀಕೆ ಪ್ರಜಾಪ್ರಭುತ್ವ ನಿಯಮದ ಉಲ್ಲಂಘನೆ: ಪಟ್ನಾಯಕ್
ಭುವನೇಶ್ವರ,ಜು.21: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರನ್ನು ವೇಶ್ಯೆಗೆ ಹೋಲಿಸಿದ ಉತ್ತರ ಪ್ರದೇಶದ ಬಿಜೆಪಿ ನಾಯಕ ದಯಾಶಂಕರ ಸಿಂಗ್ ಟೀಕೆಯ ಕುರಿತಂತೆ ಗುರುವಾರ ಬಿಜೆಪಿಯನ್ನು ತೀವ್ರ ತರಾಟೆಗೆತ್ತಿಕೊಂಡ ಒಡಿಶಾದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು, ರಾಷ್ಟ್ರಮಟ್ಟದ ದಲಿತ ನಾಯಕಿಯ ವಿರುದ್ಧ ಇಂತಹ ಅವಮಾನಕಾರಿ ಹೇಳಿಕೆಯು ಪ್ರಜಾಪ್ರಭುತ್ವದ ನಿಯಮಗಳಿಗೆ ವಿರುದ್ಧವಾಗಿದೆ. ಮಾಯಾವತಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಸಿಂಗ್ ಹೇಳಿಕೆಗಾಗಿ ಬಿಜೆಪಿಯನ್ನು ಕಟುವಾಗಿ ಟೀಕಿಸಿದ ಅವರು, ಮಾಯಾವತಿ ವಿರುದ್ಧದ ಅವಮಾನಕಾರಿ ಟೀಕೆಯು ಬಿಜೆಪಿಯ ದಲಿತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದರು. ಬಿಜೆಪಿಯು ಪಟ್ನಾಯಕ್ ಸರಕಾರವನ್ನು ಗುರಿಯಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಜು.8ರಂದು ಕಂಧಮಾಲ್ ಜಿಲ್ಲೆಯ ಅರಣ್ಯಗಳಲ್ಲಿ ಮಾವೋವಾದಿ ನಿಗ್ರಹ ಕಾರ್ಯಾಚರಣೆ ವೇಳೆ ಐವರು ವ್ಯಕ್ತಿಗಳು ಕೊಲ್ಲಲ್ಪಟ್ಟ ಬಳಿಕ ಬಿಜೆಪಿಯು ಬಿಜೆಡಿ ಸರಕಾರವನ್ನು ಗಿರಿಜನ ವಿರೋಧಿ ಮತ್ತು ದಲಿತ ವಿರೋಧಿ ಎಂದು ಬಣ್ಣಿಸಿತ್ತು.