ಅಧ್ಯಯನ ಇಲ್ಲದೆ ಕಲಾವಿದ ಪರಿಪೂರ್ಣನಾಗಲಾರ: ಮಹಾದೇವಪ್ಪ ಶಂಭುಲಿಂಗಪ್ಪ
ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರಕ್ಕೆ ಚಾಲನೆ
ಮಂಗಳೂರು, ಜು.25: ಕಲಾವಿದನಿಗೆ ಗುಣದಲ್ಲಿ ವಿನಯದ ಜೊತೆಗೆ ವೃತ್ತಿಯಲ್ಲಿ ಅಧ್ಯಯನದ ಮನೋಭಾವ ಅತೀ ಅಗತ್ಯ. ಅದಿಲ್ಲದೆ ಕಲಾವಿದ ಪರಿಪೂರ್ಣ ಆಗಲಾರ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಅಭಿಪ್ರಾಯಿಸಿದ್ದಾರೆ.
ಅವರು, ಇಂದು ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದೊಂದಿಗೆ ಇಂದಿನಿಂದ ಆಗಸ್ಟ್ 7ರವರೆಗೆ ಆಯೋಜಿಸಲಾಗಿರುವ ‘ಸಿಮೆಂಟ್ ಶಿಲ್ಪಕಲಾ ಶಿಬಿರ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲೆ ಯಾವುದೇ ರೀತಿಯ ಪ್ರಾದೇಶಿಕತೆಗೆ ಸೀಮಿತವಾದುದಲ್ಲ. ಕಲೆಗೆ ಆಯುಷ್ಯ ಎಂಬುದಿಲ್ಲ. ಅದೇ ರೀತಿ ಕಲಾವಿದರಿಗೂ ಯಾವುದೇ ಪರಿಮಿತಿ ಎಂಬುದಿಲ್ಲ. ಯಾವುದೇ ಸೀಮೆ, ಪರಿಮಿತಿಗಳಿಗೆ ಒಳಪಡದೆ ಕಲಾವಿದ ಕಾರ್ಯ ನಿರ್ವಹಿಸಬೇಕು. ಮಾತ್ರವಲ್ಲದೆ, ಕಲಾವಿದ ಯಾವತ್ತೂ ಪ್ರಶಸ್ತಿಯ ಹಿಂದೆ ಹೋಗಬಾರದು. ಬದಲಾಗಿ ಪ್ರಶಸ್ತಿ ಆತನನ್ನು ಹುಡುಕಿ ಬರುವಂತಿರಬೇಕು ಎಂದವರು ಕಿವಿಮಾತು ಹೇಳಿದರು.
ಆವೆಮಣ್ಣಿನ ಮೂರ್ತಿಯೊಂದನ್ನು ರಚಿಸುವ ಮೂಲಕ ಕಲಾವಿದ ದಯಾ ವಿಕ್ಟರ್ ಲೋಬೋ ಶಿಬಿರಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ನಿರ್ದೇಶಕ ಗೌರಿಶಂಕರ್ ಬಿ.ಜಿ., ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ವಿರೂಪಾಕ್ಷ ಬಿ. ಬಡಿಗೇರ, ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝಾರಿಯೊ, ಅಧ್ಯಕ್ಷ ಲುಯಿ ಜೆ. ಪಿಂಟೋ ಉಪಸ್ಥಿತರಿದ್ದರು. ವಿತೋರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.