ಆಮಿರ್ ಖಾನ್ ವಿರೋಧಿ ವ್ಯಂಗ್ಯ ಹೇಳಿಕೆ : ಪಾರಿಕ್ಕರ್ ಗೆ ಕಾಂಗ್ರೆಸ್ ತಿರುಗೇಟು
ಹೊಸದಿಲ್ಲಿ,ಜುಲೈ 31: ಬಾಲಿವುಡ್ ನಟ ಆಮಿರ್ಖಾನ್ ಈ ಹಿಂದೆ ನೀಡಿದ್ದ ದೇಶ ತೊರೆಯುವ ಹೇಳಿಕೆಯನ್ನು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಕಾರ್ಯಕ್ರಮವೊಂದರಲ್ಲಿ ಮತ್ತೆ ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದನ್ನು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಟೀಕಿಸಿದ್ದಾರೆಂದು ವರದಿಯಾಗಿದೆ. ಪಾರಿಕ್ಕರ್ರ ಹೇಳಿಕೆಯನ್ನು ಉಲ್ಲೇಖಿಸಿ ಅವರು "ದೇಶದ ರಕ್ಷಣೆ ಮಾಡುವುದು ನಿಮ್ಮ ಕೆಲಸ ಅಥವಾ ಆಮಿರ್ರಂತಹವರಿಗೆ ಬೆದರಿಕೆ ಹಾಕುವುದಲ್ಲ" ಎಂದು ಹೇಳಿದ್ದಾರೆಂದು ವರದಿ ತಿಳಿಸಿದೆ. ಆಮಿರ್ ಖಾನ್ರ ಹೆಸರನ್ನು ಉಲ್ಲೇಖಿಸದೆಯೇ ಪಾರಿಕ್ಕರ್" ನಟರೊಬ್ಬರು ತನ್ನ ಪತ್ನಿ ದೇಶ ತೊರೆಯಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದು ಅಹಂಕಾರದ ಹೇಳಿಕೆಯಾಗಿದೆ" ಎಂದು ಹೇಳಿದ್ದಾರೆ. "ನಾನು ಬಡವನಾಗಿದ್ದು ನನ್ನ ಮನೆ ಚಿಕ್ಕದಿದ್ದರೂ ಕೂಡಾ ನನ್ನ ಮನೆಯನೇ ನಾನು ಪ್ರೀತಿಸುವೆ ಮತ್ತು ಅದನ್ನು ಬಂಗ್ಲೆಯಂತೆ ಮಾಡುವ ಕನಸು ಕಾಣುವೆ" ಎಂದು ಪಾರಿಕ್ಕರ್ ಆಮಿರ್ ಖಾನ್ರನ್ನು ಮಾತಿನಲ್ಲಿ ಕುಟುಕಿದ್ದಾರೆ ಎನ್ನಲಾಗಿದೆ. ಆಮಿರ್ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಮರಾಠಿ ಪತ್ರಕರ್ತ ನಿತಿನ್ ಗೋಖಲೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತಾಡುತ್ತಾ ಪಾರಿಕ್ಕರ್ ಮತ್ತೊಮ್ಮೆ ಪರೋಕ್ಷವಾಗಿ ಕೆದಕಿ ವ್ಯಂಗ್ಯವಾಡಿದ್ದರು. ಪಾರಿಕ್ಕರ್ರ ಟೀಕೆಯನ್ನುಉಲ್ಲೇಖಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ " ಮನೋಹರ್ ಪಾರಿಕ್ಕರ್ ಹೇಳಿಕೆಯಿಂದ ದಲಿತರಮತ್ತು ಅಲ್ಪಸಂಖ್ಯಾತರನ್ನು ದಮನಿಸುವ ಸಂಚು ಸ್ಪಷ್ಟವಾಗುತ್ತಿದೆ. ಇವೆಲ್ಲ ರಾಜಧರ್ಮವಾಗಿದೆಯೇ? ಪಾರಿಕ್ಕರ್ ರಕೆಲಸ ಭಾರತವನ್ನು ವೈರಿ ರಾಷ್ಟ್ರಗಳಿಂದ ರಕ್ಷಿಸುವುದಾಗಿದೆಯೇ ಹೊರತು ಆಮಿರ್ಖಾನ್ರಂತಹ ನಾಗರಿಕರನ್ನು ಬೆದರಿಸುವುದಲ್ಲ" ಎಂದು ಖಾರವಾಗಿ ಪಾರಿಕ್ಕರ್ಗೆ ಪ್ರತ್ಯುತ್ತರ ನೀಡಿದ್ದಾರೆ ಎಂದು ವರದಿಯಾಗಿದೆ.