ಯಾರನ್ನಾದರೂ ಸೋಲಿಸಿ ತಾನು ಸ್ಥಾನ ಪಡೆಯಬೇಕು ಎಂಬ ಚಿಂತನೆ ಸಮಾಜಕ್ಕೆ ಶ್ರೇಯಸ್ಸಲ್ಲ : ಶಕುಂತಳಾ ಶೆಟ್ಟಿ
ಬೊಂಡಾಲ ಜಗನ್ನಾಥ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮ
ಪುತ್ತೂರು,ಜು.31: ಯಾರನ್ನಾದರೂ ಸೋಲಿಸಿ ತಾನು ಸ್ಥಾನ ಪಡೆಯಬೇಕು ಎಂಬ ಚಿಂತನೆ ಸಮಾಜಕ್ಕೆ ಶ್ರೇಯಸ್ಸಲ್ಲ, ಆದರ್ಶ ವ್ಯಕ್ತಿತ್ವದ ಹುಡುಕಾಟ ಮನೆಯೊಳಗೆ ನಡೆಯಬೇಕು ಎಂದು ಪುತ್ತೂರು ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಭಾನುವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬೊಂಡಾಲ ಜಗನ್ನಾಥ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆದರ್ಶ ವ್ಯಕ್ತಿಗಳು ಇನ್ನೊಮ್ಮೆ ಹುಟ್ಟಿ ಬರಲಿ ಎಂದು ಬಯಸುವ ನಾವು ನಮ್ಮ ಮನೆಯಲ್ಲಿ ಅಂತಹ ವ್ಯಕ್ತಿಗಳನ್ನು ಸೃಷ್ಟಿಸುವ ಕೆಲಸ ಮಾಡಬೇಕು.ಜಗನ್ನಾಥ ಶೆಟ್ಟಿ ಅವರನ್ನು ಸ್ಮರಿಸುವುದರೊಂದಿಗೆ ಅವತ ನಾಯಕತ್ವ ಗುಣ, ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ಪಾದರಸದ ನಾಯಕತ್ವ ಹೊಂದಿದ್ದ ಬೊಂಡಾಲ ಜಗನ್ನಾಥ ಶೆಟ್ಟಿ ಅವರಷ್ಟು ಸಮರ್ಥ ನಾಯಕರು ಇನ್ನೊಬ್ಬರಿಲ್ಲ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲುಲ್ ರಹೀಂ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ಚಂದ್ರ ಆಳ್ವ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಮಳ ರಾಮಚಂದ್ರ, ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಕಾಂಗ್ರೆಸ್ನ ಸಾರ್ಥಕ್ ರೈ, ಮುಖಂಡರಾದ ಜೋಕಿಂ ಡಿಸೋಜಾ, ದೇವಪ್ಪ ಗೌಡ, ಭಾಸ್ಕರ ಕೋಡಿಂಬಾಳ ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ದರ್ಬೆ ಸ್ವಾಗತಿಸಿ, ವಂದಿಸಿದರು. ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.