ಆಗ್ರಾ: ಅಂಬೇಡ್ಕರ್ ಪ್ರತಿಮೆಗೆ ಹಾನಿ, ಉದ್ವಿಗ್ನತೆ
ಆಗ್ರಾ, ಆ.4: ಕಸ್ಗಾನಿ ಜಿಲ್ಲೆಯ ಪಟಿಯಾಲಿ ಪ್ರದೇಶದ ದಲಿತ ಬಾಹುಳ್ಯದ ಕುತುಬ್ಸರಾಯ್ ಎಂಬಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ ಮತ್ತೊಂದು ಪ್ರಕರಣ ನಡೆದಿದ್ದು, ಇದರಿಂದ ಆಗ್ರ ಮತ್ತೆ ಉದ್ವಿಗ್ನವಾಗಿದೆ.
ಕಳೆದ ಮೂರು ದಿನದಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸುತ್ತಿರುವ ಎರಡನೆ ಪ್ರಕರಣ ಇದಾಗಿದೆ. ಘಟನೆ ಬಳಿಕ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಇದ್ದು, ದಲಿತರು ಪ್ರತಿಭಟನೆ ನಡೆಸಿ, ಕಿಡಿಗೇಡಿಗಳ ಪತ್ತೆಗೆ ಆಗ್ರಹಿಸಿದರು. ದಲಿತ ಭಾವನೆಗಳಿಗೆ ಧಕ್ಕೆ ತರುವಂಥ ಕೃತ್ಯ ಎಸಗಿದವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸ್ಥಳೀಯ ಮುಖಂಡ ವೀರಪಾಲ್ ಸಿಂಗ್ ಎಂಬುವವರು ಈ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಮಂಗಳವಾರ ರಾತ್ರಿ ಮೇಲ್ವರ್ಗಕ್ಕೆ ಸೇರಿದ ಐವರು ಯುವಕರು ಕಬ್ಬಿಣದ ರಾಡ್ ಹಾಗೂ ಮರದ ಬಡಿಗೆಗಳಿಂದ ಅಂಬೇಡ್ಕರ್ ಪುತ್ಥಳಿ ವಿರೂಪಗೊಳಿಸಿದ್ದಾರೆ. ಪ್ರತಿಮೆಯ ಕೈ ಹಾಗೂ ಬೆರಳುಗಳಿಗೆ ಹಾನಿ ಮಾಡಿದ್ದಾರೆ. ಈ ಕೃತ್ಯವನ್ನು ಗ್ರಾಮದ ಮಹಿಳೆಯೊಬ್ಬರು ನೋಡಿದ್ದು, ಸತ್ಯಪಾಲ್ ಸಿಂಗ್, ಲಾಲೂ ಸಿಂಗ್, ವಿಪಿನ್ ಸಿಂಗ್, ಧರ್ಮೇಂದ್ರ ಹಾಗೂ ಆಕಾಶನ್ ಎನ್ನುವವರು ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಯುವಕರನ್ನು ಗುರುತಿಸಿದ ಮಹಿಳೆಗೆ ದಾಳಿಕೋರರು ಬೆದರಿಕೆ ಹಾಕಿದ್ದಾಗಿಯೂ ದೂರು ನೀಡಿದ್ದಾರೆ.