ಹೊಸತನದ ಹುಡುಕಾಟದಲ್ಲಿ ಮೌಲ್ಯಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ : ಸುಧಾಕರ್ ಸುವರ್ಣ
ಪುತ್ತೂರು, ಆ.5: ಮಾನವನ ಸಂಬಂಧಗಳು ಲಘುವಾಗಿರದೆ ಬಿಗಿಯಾಗಿರಬೇಕು. ವ್ಯಕ್ತಿ ವ್ಯಕ್ತಿಯ ನಡುವಿನ ಸಂಬಂಧ ಗಟ್ಟಿಯಾಗಬೇಕು. ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕು. ಆಗ ಮಾತ್ರ ಜೀವನವು ಆನಂದದಿಂದ ಕೂಡಿರುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ಕೊಡಲು ಜೀವನವು ಮೌಲ್ಯಯುತವಾಗಿರಬೇಕು ಎಂದು ಹಿರಿಯ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು.
ಕಾಲೇಜಿನ ಮಾನವಿಕ ಸಂಘ ಮತ್ತು ಪೊಲಿಟಿಕಲ್ ಪೋರಂನ ಶೈಕ್ಷಣಿಕ ಕಾರ್ಯ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರು ಕಟ್ಟಿಕೊಟ್ಟ ವೌಲ್ಯಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಆದರೆ ಪ್ರಸ್ತುತ ಸಮಾಜದಲ್ಲಿ ಜನರು ಈ ವಿಚಾರಗಳನ್ನು ಮರೆತಂತಿದ್ದಾರೆ. ಹೊಸತನದ ಹುಡುಕಾಟದಲ್ಲಿ ವೌಲ್ಯಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ನಮ್ಮ ಚಿಂತನೆ ವಿಚಾರಗಳೆಲ್ಲದರಲ್ಲೂ ವೌಲ್ಯವನ್ನು ಕಾಪಾಡಿಕೊಳ್ಳಬೇಕು. ಮೌಲ್ಯಗಳು ನಮ್ಮ ಜೀವನದ ಆದರ್ಶವಾಗಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಜನರು ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ಹಿರಿಯರು ಕಟ್ಟಿಕೊಟ್ಟ ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಯು ಬೆಳೆಸಿಕೊಳ್ಳುವಂತಾಗಬೇಕು. ವಿಚಾರ ಮಾಡುವಿಕೆ ಮತ್ತು ಮೌಲ್ಯಗಳನ್ನು ತಿಳಿಸಿಕೊಡುವುದೇ ಮಾನವಿಕ ಸಂಘದ ಮೂಲ ಉದ್ದೇಶ. ವಿದ್ಯಾರ್ಥಿಗಳು ಈ ವೇದಿಕೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮಾನವಿಕ ಸಂಘದ ಸಂಯೋಜಕರಾದ ಅನಿತಾ ಕಾಮತ್, ವಾಸುದೇವ ಎನ್. ಹಾಗೂ ಪೊಲಿಟಿಕಲ್ ಪೋರಂನ ಸಂಯೋಜಕಿ ಕವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜಯಶ್ರೀ ಸ್ವಾಗತಿಸಿದರು. ಮಾನವಿಕ ಸಂಘದ ಜಂಟಿ ಕಾರ್ಯದರ್ಶಿ ವೀಣಾ ವಂದಿಸಿದರು. ವಿದ್ಯಾರ್ಥಿನಿ ಭವ್ಯಶ್ರೀ ಕೆ. ಕಾರ್ಯಕ್ರಮ ನಿರೂಪಿಸಿದರು.