ಸರಳತೆಯಿಂದ ಮನಗೆದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ !
ಹೊಸದಿಲ್ಲಿ , ಆ. 6 : ರಾಜಕಾರಣಿಗಳು ಹಿಂದೊಂದು ಗುಂಪು ಕಟ್ಟಿಕೊಳ್ಳದೆ ಎಲ್ಲಿಗೂ ಹೋಗುವುದು ಇಲ್ಲವೇ ಇಲ್ಲ. ಅದರಲ್ಲೂ ಅಧಿಕಾರದಲ್ಲಿರುವವರು ! ಅದರಲ್ಲೂ ಕೇಂದ್ರ ಸರಕಾರದಲ್ಲಿ ಸಂಪುಟ ಸಚಿವರಾಗಿರುವವರು !
ಹೌದು. ಇತ್ತೀಚಿಗೆ ಹೆಚ್ಚು ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿರುವ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ತಮ್ಮ ಸರಳತೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದಿಲ್ಲಿಯ ಕನ್ನಾಟ್ ಪ್ಲೇಸ್ ನಲ್ಲಿರುವ ಸ್ಟಾರ್ ಬಕ್ಸ್ ಮಳಿಗೆಗೆ ಏಕಾಂಗಿಯಾಗಿ ಯಾವುದೇ ಭದ್ರತೆ, ಹಿಂಬಾಲಕರು ಇಲ್ಲದೆ ಬಂದ ಸ್ಮೃತಿ ಸರತಿ ಸಾಲಲ್ಲಿ ನಿಂತು ತಮ್ಮ ಸರದಿಗೆ ಕಾದು ಆರ್ಡರ್ ಮಾಡಿ ಬಳಿಕ ಅಷ್ಟೇ ತಾಳ್ಮೆಯಿಂದ ತಮ್ಮ ಪಾರ್ಸಲ್ ಸಿದ್ಧವಾಗುವವರೆಗೆ ಕಾದು ಅದನ್ನು ಪಡೆದು ಅಲ್ಲಿಂದ ಸದ್ದಿಲ್ಲದೆ ಹೊರಟಿದ್ದಾರೆ.
ಇದನ್ನು ದಿಲ್ಲಿ ಮೂಲದ ಲೇಖಕ ನಿಮಿಶ್ ದುಬೇ ತಮ್ಮ ಫೇಸ್ ಬುಕ್ ನಲ್ಲಿ ಫೋಟೋ ಸಹಿತ ಬರೆದಿದ್ದಾರೆ. ಮಾತ್ರವಲ್ಲ ಹೀಗೆ ಹಲವು ಬಾರಿ ಸ್ಟಾರ್ ಬಕ್ಸ್ ಗೆ ಬಂದು ಹೋಗಿದ್ದಾರೆ ಎಂದೂ ದುಬೇ ಹೇಳಿದ್ದಾರೆ. ಬೇರೆ ಏನೇ ಟೀಕೆ ಟಿಪ್ಪಣಿಗಳಿರಲಿ, ಸ್ಮೃತಿಯ ಈ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು.