ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು:ಎ.ಬಿ.ಇಬ್ರಾಹೀಂ
ಬಂಟ್ವಾಳ, ಆ. 7: ಕಾನೂನಿನ ಚೌಕಟ್ಟನ್ನು ಮೀರದೆ ದೃಢ ನಿಲುವು ಹಾಗೂ ಕಠಿಣ ಪರಿಶ್ರಮದಿಂದ ಓದಿ ಉನ್ನತ ವ್ಯಾಸಂಗ ಮಾಡಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ದ.ಕ. ನಿರ್ಗಮಿತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದ್ದಾರೆ. ಬಂಟ್ವಾಳ ತಾಲೂಕಿನ ಮೆಲ್ಕಾರ್ ವುಮೆನ್ಸ್ ಪಿಯು ಮತ್ತು ಪದವಿ ಕಾಲೇಜಿನ 2016-17ನೆ ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರ ಬಾಳನ್ನು ಬೆಳಗಲು ಶಿಕ್ಷಣವೂ ಪರಿಣಾಮಕಾರಿ ಅಸ್ತ್ರವಾಗಿದ್ದು, ಹೆಣ್ಣು ಕಲಿಯುವುದೇ ಅಪರಾಧ ಎಂಬ ಮನಸ್ಥಿತಿಯನ್ನು ಹೊಂದಿದ್ದ ಸಮುದಾಯದ ಹೆಣ್ಣು ಮಕ್ಕಳಿಗೆ ಸಜಿಪಮುನ್ನೂರುನಂತಹ ಕುಗ್ರಾಮದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಎಲ್ಲ ವ್ಯವಸ್ಥೆಗಳನ್ನೊಳಗೊಂಡ ಕಾಲೇಜು ನಿರ್ಮಾಣವಾಗಿರುವುದು ಕ್ರಾಂತಿಕಾರಕ ಬೆಳವಣಿಗೆ ಎಂದರು. ಕಾಲೇಜಿನ ಚೇರ್ಮ್ಯನ್ ಎಸ್.ಎಂ.ರಶೀದ್ ಹಾಜಿ ಮಾತನಾಡಿ, ದ.ಕ. ಜಿಲ್ಲಾಧಿಕಾರಿಯಾಗಿ ಎ.ಬಿ.ಇಬ್ರಾಹೀಂ ಮಾಡಿರುವ ಸಾಧನೆಯನ್ನು ಶ್ಲಾಘಿಸಿದರು. ಮಾಜಿ ಜಿಪಂ ಸದಸ್ಯ ಎಸ್.ಅಬ್ಬಾಸ್, ಹಮೀದ್ ಮಾಸ್ಟರ್, ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆಯಿಷಾ ಸನೂಪ ಸ್ವಾಗತಿಸಿದರು. ಆಯಿಷಾ ವಂದಿಸಿದರು. ನಶತ್ತುನ್ನಿಶಾ ಕಾರ್ಯಕ್ರಮ ನಿರೂಪಿಸಿದರು.