ಕಾಶ್ಮೀರಿಗಳ ಜೊತೆ ಮಾತುಕತೆ ಪ್ರಕ್ರಿಯೆ ಆರಂಭಿಸಿ
ಮೋದಿಗೆ ಮೆಹಬೂಬ ಕರೆ
ಹೊಸದಿಲ್ಲಿ, ಆ.8: ಕಾಶ್ಮೀರದ ಜನತೆಯ ಜೊತೆ ಮಾತುಕತೆ ಪ್ರಕ್ರಿಯೆಯನ್ನು ಶೀಘ್ರ ದಲ್ಲೇ ಆರಂಭಿಸಬೇಕೆಂದು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಕೇಂದ್ರ ಸರಕಾರವನ್ನು ಬಲವಾಗಿ ಆಗ್ರಹಿಸಿದ್ದಾರೆ. ಕಾಶ್ಮೀರದ ಜನತೆಯ ಸಮಸ್ಯೆಗಳನ್ನು ಬಗೆಹರಿಸಿ, ಅವರ ಹೃದಯವನ್ನು ಗೆಲ್ಲುವ ಮೂಲಕ, ಅಲ್ಲಿ ಸೃಷ್ಟಿಯಾಗಿರುವ ಅಶಾಂತಿಯ ವಾತಾವರಣವನ್ನು ಕೊನೆಗೊಳಿಸ ಬೇಕು ಎಂದವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಹೊಸದಿಲ್ಲಿಗೆ ಆಗಮಿಸಿರುವ ಮೆಹಬೂಬ ಸೋಮವಾರ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಜೊತೆ ಸುಮಾರು ಎರಡು ತಾಸುಗಳ ಕಾಲ ಮಾತುಕತೆ ನಡೆಸಿದರು. ಕಳೆದೊಂದು ತಿಂಗಳಿಂದ ಹಿಂಸಾಚಾರದಿಂದ ತತ್ತರಿಸಿರುವ ಕಾಶ್ಮೀರ ಕಣಿವೆಯಲ್ಲಿನ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಅವರು ಗೃಹ ಸಚಿವ ರೊಂದಿಗೆ ಚರ್ಚಿಸಿದರು.
ಮಾತುಕತೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮೆಹಬೂಬ ಅವರು, ‘‘ಜಮ್ಮುಕಾಶ್ಮೀರದ ಜನತೆಯ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಮಾತುಕತೆ ಪ್ರಕ್ರಿಯೆಯನ್ನು ಆರಂಭಿಸಲು ಪ್ರಧಾನಿಯವರು ಈ ಅವಕಾಶವನ್ನು ಬಳಸಿಕೊಳ್ಳುವರೆಂಬ ಭರವಸೆ ನನಗಿದೆ. ಜನತೆಯ ಹೃದಯವನ್ನು ಗೆಲ್ಲಲು ವಾಜಪೇಯಿಜೀಯವರ ಅಧಿಕಾರಾವಧಿ ಯಲ್ಲಿ ಕೈಗೊಂಡಂತಹ ಉಪಕ್ರಮಗಳನ್ನು ಈಗಲೂ ಕೈಗೊಳ್ಳುವ ಅಗತ್ಯವಿದೆ’’ ಎಂದು ಅಭಿಪ್ರಾಯಿಸಿದರು.
ಜಮ್ಮುಕಾಶ್ಮೀರದಲ್ಲಿನ ಪರಿಸ್ಥಿತಿಯ ಪರಾಮರ್ಶೆಗಾಗಿ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಈ ಸಭೆಯನ್ನು ಕರೆದಿದ್ದರು. ಮೆಹಬೂಬ ಮುಫ್ತಿ ಅವರನ್ನೂ ಈ ಸಭೆಗೆ ಆಹ್ವಾನಿಸಲಾಗಿತ್ತು. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಎ.ಕೆ. ಧೋವಲ್ ಹಾಗೂ ಗೃಹ, ರಕ್ಷಣೆ ಹಾಗೂ ವಿತ್ತ ಸಚಿವಾಲಯಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
‘‘ಮಾತುಕತೆಯ ಪ್ರಕ್ರಿಯೆಯನ್ನು ಆರಂಭಿಸುವ ಮೂಲಕ ಜನತೆಯ ಗಾಯ ಗಳಿಗೆ ಉಪಶಮನ ನೀಡುವ ಅಗತ್ಯವಿದೆ. ಅವರು ನಮ್ಮ ಜನರೇ ಆಗಿದ್ದಾರೆ. ಜಮ್ಮು ಕಾಶ್ಮೀರದ ಜನತೆಯ ಜೊತೆ ಮಾತುಕತೆಯನ್ನು ನಡೆಸುವ ಮೂಲಕ ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಣೆಗೊಳಿಸಬಹುದಾದರೆ, ನಾವದನ್ನು ಮಾಡಬೇಕಿದೆ’’ ಎಂದು ಆಕೆ ತಿಳಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಬಾಂಧವ್ಯಕ್ಕೆ ಕಾಶ್ಮೀರವು ಸೇತುವೆ ಯಾಗಬಹುದಾಗಿದೆಯೆಂದು ಆಕೆ ಅಭಿಪ್ರಾಯಿಸಿದ್ದಾರೆ.