ನಾಳೆ ಅರಸು ಜನ್ಮ ಶತಮಾನೋತ್ಸವ: ಎರಡು ದಿನಗಳ ನಾಯಕತ್ವ ಶಿಬಿರ
ಮಂಗಳೂರು,ಆ.11: ದ.ಕ ಜಿಲ್ಲಾಡಳಿತ, ದ.ಕ. ಜಿಪಂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಸಮತಾ ಸಮಾಜ ನಾಯಕತ್ವ ನಿರ್ಮಾಣ ಶಿಬಿರವು ಆ.13 ಮತ್ತು 14ರಂದು ಮಂಗಳೂರಿನಲ್ಲಿ ನಡೆಯಲಿದೆ.
ಆ. 13 ರಂದು ಬೆಳಗ್ಗೆ 9:30ಕ್ಕೆ ಬಲ್ಮಠ ಸಹೋದಯ ಹಾಲ್ನಲ್ಲಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಶಿಬಿರದ ಅಂಗವಾಗಿ ಮೊದಲನೆ ಅಧಿವೇಶನವು ಪೂರ್ವಾಹ್ನ 11:30ರಿಂದ ಮಧ್ಯಾಹ್ನ 1:45ರವರೆಗೆ ನಡೆಯಲಿದ್ದು, ಅರಸು ಮತ್ತು ಮೀಸಲಾತಿ ವಿಷಯದ ಕುರಿತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಮಾತನಾಡುವರು. ಎರಡನೇ ಅಧಿವೇಶನ ಮಧ್ಯಾಹ್ನ 2:15 ರಿಂದ ಸಂಜೆ 4:30ರವರೆಗೆ ಅರಸು ಮತ್ತು ಹಿಂದುಳಿದ ವರ್ಗಗಳ ರಾಜಕೀಯ ವಿಷಯದ ಬಗ್ಗೆ ಉಪನ್ಯಾಸಕ ಡಾ. ದಿನೇಶ್ ಹೆಗ್ಡೆ ಮಾತನಾಡುವರು. ಸಂಜೆ 4:30 ರಿಂದ 6 ಗಂಟೆಯವರೆಗೆ ಅರಸು ಅವರ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಚರ್ಚೆ ನಡೆಯಲಿದೆ.
ಆ.14 ರಂದು ಮೊದಲನೇ ಅಧಿವೇಶನ ಬೆಳಗ್ಗೆ 10ರಿಂದ ಮಧ್ಯಾಹ್ನ 12:30ರವರೆಗೆ ಅರಸು ಮತ್ತು ಭೂಮಸೂದೆ ಎಂಬ ವಿಷಯದ ಬಗ್ಗೆ ಬಾಲಕೃಷ್ಣ ಎನ್. ಶೆಟ್ಟಿ ಬ್ರಹ್ಮಾವರ, ಎರಡನೆ ಅಧಿವೇಶನ ಮಧ್ಯಾಹ್ನ 1:30ರಿಂದ ಅಪರಾಹ್ನ್ನ 3:15 ರವರೆಗೆ ಅರಸು ಮತ್ತು ಸಾಮಾಜಿಕ ಅಭಿವೃದ್ಧಿ ಎಂಬ ವಿಷಯದ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ಎಂ. ಚಂದ್ರ ಪೂಜಾರಿ ಉಪನ್ಯಾಸ ನೀಡಲಿದ್ದಾರೆ. ಅಪರಾಹ್ನ್ನ 3:30 ರಿಂದ ಸಂಜೆ 4:30ರವರೆಗೆ ನಡೆಯುವ ಮುಕ್ತಾಯ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ವಿವಿ ಪ್ರಾಧ್ಯಾಪಕ ಪ್ರೊ. ಸಿ.ಕೆ.ರವಿ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.