ಕಡಬ: ವರದಕ್ಷಿಣೆಗಾಗಿ ಪತ್ನಿಗೆ ಹಿಂಸೆ; ಪ್ರಕರಣ ದಾಖಲಿಸಲು ಪೊಲೀಸರಿಗೆ ನ್ಯಾಯಾಲಯದ ಆದೇಶ
ಕಡಬ,ಆ.3 ವರದಕ್ಷಿಣೆ ತರುವಂತೆ ಪಿಡಿಸಿ ದೈಹಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ ಮಹಿಳೆಯೋರ್ವರು ತನ್ನ ಪತಿಯ ವಿರುದ್ಧ ಪುತ್ತೂರು ನ್ಯಾಯಾಲಯಕ್ಕೆ ದೂರು ನೀಡಿದ್ದು, ಈ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕಡಬ ಪೊಲೀಸರಿಗೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಯ್ಲ ಗ್ರಾಮದ ಎಲ್ಯಂಗ ನಿವಾಸಿ ರಹಮತ್ ಎಂಬವರು ತನ್ನ ಗಂಡ ಮುಹಮ್ಮದ್ ಶರೀಫ್ ಹಾಗೂ ಮಾವ ಮೊಯ್ದು ಕುಂಞ ವಿರುದ್ಧ ಜೆಎಂ.ಎಫ್ಸಿ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದಾರೆ.
ಕೊಯ್ಲ ನಿವಾಸಿ ರಹಮತ್ 2014ರ ಜೂನ್ 12ರಂದು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಬಡಾಜೆ ಮೊಯ್ದು ಕುಂಞಿ ಎಂಬವರ ಮಗ ಮಹಮ್ಮದ್ ಶರೀಫ್ ಎಂಬವರೊಂದಿಗೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಎರಡು ತಿಂಗಳ ಕಾಲ ಅನ್ಯೋನ್ಯವಾಗಿದ್ದು ಬಳಿಕ ಮುಹಮ್ಮದ್ ಶರೀಫ್ ವರದಕ್ಷಿಣೆ ತರುವಂತೆ ಒತ್ತಾಯಿಸಿ ತನ್ನ ತಂದೆಯವರೊಂದಿಗೆ ಸೇರಿಕೊಂಡು ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು.
ಈ ಬಗ್ಗೆ ಗಣ್ಯರ ಉಪಸ್ಥಿತಿಯಲ್ಲಿ ರಾಜಿ ಪಂಚಾತಿಗೆ ಮಾಡಿದ್ದರೂ ಆರೋಪಿ ಮುಹಮ್ಮದ್ ಶರೀಫ್ 10ಲಕ್ಷ ರೂ. ವರದಕ್ಷಿಣೆ ಹಣ ನೀಡುವಂತೆ ಪೀಡಿಸುತ್ತಿದ್ದರು. ಇವರ ಹಿಂಸೆಗೆ ಹೆದರಿ ರಹಮತ್ ತನ್ನ ತವರು ಮನೆ ಕೊಯ್ಲಕ್ಕೆ ಬಂದಿದ್ದರು. ಅಲ್ಲಿಗೆ ಬಂದ ಮುಹಮ್ಮದ್ ಶರೀಫ್ ಹಣ ನೀಡುವಂತೆ ಪತ್ನಿಗೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡ ರಹಮತ್ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕವೂ ಗಣ್ಯರ ಉಪಸ್ಥಿತಿಯಲ್ಲಿ ರಾಜಿ ಪಂಚಾತಿಕೆ ನಡೆಸಿ ರಹಮತ್ರನ್ನು ಗಂಡನ ಮನೆಗೆ ಪುನಃ ಕಳುಹಿಸಲಾಗಿತ್ತು ಎನ್ನಲಾಗಿದೆ.
ಆದರೆ ಬಳಿಕವೂ ಮುಹಮ್ಮದ್ ಶರೀಫ್ ಪತ್ನಿಗೆ ಹಿಂಸೆ ನೀಡಿದ್ದರಿಂದ ರಹಮತ್ ತವರು ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಬಂದ ಮುಹಮ್ಮದ್ ಶರೀಫ್ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ 2ನೆ ಮದುವೆಗೆ ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಇದಕ್ಕೆ ರಹಮತ್ ಒಪ್ಪದೆ ಇದ್ದಾಗ ಮುಹಮ್ಮದ್ ಶರೀಫ್ ಬೆದರಿಕೆ ಹಾಕಿದ್ದರು. ಈ ವೇಳೆ ರಹಮತ್ರ ಅಣ್ಣ ರಮ್ಲ, ಬಾವ ಮುಹಮ್ಮದ್ ಅಲ್ಲದೆ ನೆರೆಕರೆಯ ಅಶ್ರಫ್ ಹಾಗೂ ಸಿರಾಜ್ ಬಂದಿದ್ದು ಇವರನ್ನು ಕಂಡ ಮುಹಮ್ಮದ್ ಶರೀಫ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ವಿರುದ್ಧ ಕೇಸು ದಾಖಲಿಸುವಂತೆ ಕಡಬ ಪೊಲೀಸರಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಆರೋಪಿ ಮುಹಮ್ಮದ್ ಶರೀಫ್ ಹಾಗೂ ಅವರ ತಂದೆ ಮೊಯ್ದು ಕುಂಞಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.