ಕೇಂದ್ರ ಸರಕಾರದ ಕಾಮಗಾರಿಗಳಲ್ಲಿ ರಾಜಕೀಯ ಬೇಡ: ಸಂಸದೆ ಶೋಭಾ
ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ
ಉಡುಪಿ, ಆ.13: ಕೇಂದ್ರ ಸರಕಾರದ ಯೋಜನೆ 'ಸಖಿ' ಓನ್ ಸ್ಟಾಪ್ ಸೆಂಟರ್ನ ಶಿಲಾನ್ಯಾಸ ಕಾರ್ಯಕ್ರಮವನ್ನು ತನ್ನ ಅನುಪಸ್ಥಿತಿಯಲ್ಲಿ ನಡೆಸಿರುವುದರ ಬಗ್ಗೆ ಗರಂ ಆದ ಸಂಸದೆ ಶೋಭಾ ಕರಂದ್ಲಾಜೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಕೇಂದ್ರ ಸರಕಾರದ ಯೋಜನೆ ಜಾರಿಗೆ ತರುವಾಗ ಶಿಷ್ಟಾಚಾರ ಪಾಲಿಸುವಂತೆ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಲ್ಲಿರುವ ಉಡುಪಿ ಜಿಪಂನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ 2016-17ನೆ ಸಾಲಿನ ಜುಲೈ ಅಂತ್ಯದವರೆಗಿನಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರದಿಂದ ನಾವು ದುಡ್ಡು ತಂದರೂ ನಮ್ಮ ಅನುಪಸ್ಥಿತಿಯಲ್ಲಿ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತದೆ. ನಾನು ಕ್ಷೇತ್ರದಲ್ಲಿರುವಾಗ ಶಿಲಾನ್ಯಾಸ ಮಾಡಿ ಅಂತ ಸೂಚಿಸಿದರೂ ನಾನಿಲ್ಲದಾಗಲೇ ಶಿಲಾನ್ಯಾಸ ಮಾಡಿದ್ದಾರೆ. ಇದರಲ್ಲಿ ರಾಜಕೀಯ ಮಾಡಿದರೆ ಮುಂದೆ ನಾವು ಕೂಡ ರಾಜಕೀಯ ಮಾಡ ಬೇಕಾಗುತ್ತದೆ. ಇಂತಹ ವಿಷಯಗಳಲ್ಲಿ ನಿಮ್ಮ ಮಂತ್ರಿ ರಾಜಕೀಯ ಮಾಡಿದರೆ, ನಾವು ಅನುದಾನವನ್ನು ತಡೆಹಿಡಿದು ಮುಂದೆ ನಮ್ಮ ಸರಕಾರ ಬಂದಾಗ ಮಾಡಿಕೊಳ್ಳಬೇಕಾಗುತ್ತದೆ. ಸಖಿಯಂತಹ ಮಹಿಳೆಯರ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಿರುವುದು ಸರಿಯಲ್ಲ. ಇನ್ನು ಮುಂದೆ ಕೇಂದ್ರ ಸರಕಾರ ಅನುದಾನದ ಅಭಿವೃದ್ಧಿ ಕಾಮಗಾರಿಗಳನ್ನು ನಾವು ಇಲ್ಲದೆ ಮಾಡಬಾರದು ಎಂದು ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ಗೆ ಸೂಚನೆ ನೀಡಿದರು.
ಮಲ್ಪೆಮೀನುಗಾರಿಕಾ ಬಂದರಿನ 3ನೆ ಹಂತದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಮಲ್ಪೆ ಮೀನುಗಾರಿಕಾ ಬಂದರಿನ ಬೋಟ್ ಬೇಸಿನ್ನಲ್ಲಿ ಹೂಳೆತ್ತುವ 225 ಲಕ್ಷ ರೂ. ಕಾಮಗಾರಿ ಪ್ರಗತಿಯಲ್ಲಿದೆ. ಅದೇ ರೀತಿ 59 ಲಕ್ಷ ರೂ. ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಇಂಜಿನಿಯರ್ ಬಂದರು ಮತ್ತು ಮೀನುಗಾರಿಕಾ ವಿಭಾಗ ಸಹಾಯಕ ಕಾರ್ಯನಿರ್ವಾಹಕರು ತಿಳಿಸಿದರು ಮಲ್ಪೆ -ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು 60-80ವೇಗಮಿತಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತೀರ್ಥಹಳ್ಳಿ ಹಾಗೂ ಉಡುಪಿ ಪೇಟೆ ಮತ್ತು ಆಗುಂಬೆ ಘಾಟಿಯನ್ನು ಹೊರತು ಪಡಿಸಿ ಐದು ವಿಭಾಗಗಳನ್ನಾಗಿಸಿ ವಿಸ್ತೃತ ಸರ್ವೇ ನಡೆಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಐದು ತಿಂಗಳ ಕಾಲಾವಧಿ ನೀಡಲಾಗಿದೆ. ಅದೇ ರೀತಿ ಮಲ್ಪೆ-ಆತ್ರಾಡಿ ವರೆಗೆ ಚತುಷ್ಪಥ ಕಾಮಗಾರಿಗೆ 95ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಅಭಿಯಂತರ ಹೇಳಿದರು.