ಈ ಅನಿಷ್ಟದಿಂದ ಸ್ವಾತಂತ್ರ್ಯ ಎಂದು?
ಮ್ಯಾನ್ಹೋಲ್ ವಿಷಾನಿಲಕ್ಕೆ ನಾಲ್ವರು ಕಾರ್ಮಿಕರು ಬಲಿ
ಹೈದರಾಬಾದ್, ಆ.14: ಇಡೀ ದೇಶ ಸ್ವಾತಂತ್ರ್ಯ ದಿನದ ಸಂಭ್ರಮಕ್ಕೆ ಸಜ್ಜಾಗುತ್ತಿದ್ದರೆ, ಈ ಪೌರ ಕಾರ್ಮಿಕರ ಕುಟುಂಬಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಹೈದರಾಬಾದ್ನಲ್ಲಿ ಒಳಚರಂಡಿ ಮ್ಯಾನ್ಹೋಲ್ ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಪೌರಕಾರ್ಮಿಕರು ವಿಷಾನಿಲದಿಂದ ಉಸಿರುಗಟ್ಟಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಪೌರಕಾರ್ಮಿಕರಿಗೆ ಮಾತ್ರ ಈ ಅಮಾನವೀಯ ಪದ್ಧತಿಯಿಂದ ಸ್ವಾತಂತ್ರ್ಯ ಇನ್ನೂ ಕನ್ನಡಿಯ ಗಂಟಾಗಿಯೇ ಉಳಿದಿದೆ.
ಹೈದರಾಬಾದ್ ಮೆಟ್ರೊ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗುತ್ತಿಗೆ ಕಾರ್ಮಿಕರು ಮ್ಯಾನ್ಹೋಲ್ನಲ್ಲಿ ವಿಷಾನಿಲದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಐಟಿ ಹಬ್ ಮಾಧಾಪುರದ ಮೇಲ್ಭಾಗದ ಅಯ್ಯಪ್ಪ ಸೊಸೈಟಿಯ ಬಳಿ ಈ ದುರ್ಘಟನೆ ಸಂಭವಿಸಿದೆ.
ಇಬ್ಬರು ಪೌರಕಾರ್ಮಿಕರು 20 ಅಡಿ ಆಳದ ಮ್ಯಾನ್ಹೋಲ್ ಸ್ವಚ್ಛಗೊಳಿಸುತ್ತಿದ್ದಾಗ, ವಿಷಾನಿಲದಿಂದ ಪ್ರಜ್ಞಾಶೂನ್ಯರಾಗಿ ಬಿದ್ದರು. ಅವರನ್ನು ಉಳಿಸುವ ಸಲುವಾಗಿ ಮ್ಯಾನ್ಹೋಲ್ಗೆ ಇಳಿದ ಮತ್ತಿಬ್ಬರು ಕೂಡಾ ಸಿಕ್ಕಿಹಾಕಿಕೊಂಡರು ಎಂದು ಪೊಲೀಸರು ವಿವರಿಸಿದ್ದಾರೆ.
ಅಸ್ವಸ್ಥರನ್ನು ಸಾಗಿಸಲು ಧಾವಿಸಿದ 108 ಆಂಬುಲೆನ್ಸ್ನ ಸಿಬ್ಬಂದಿ ಕೂಡಾ ವಿಷಾನಿಲ ಸೇವನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ಕಾರ್ಮಿಕರ ಶವಗಳನ್ನು ಪರಿಹಾರ ಕಾರ್ಯಾಚರಣೆ ಸಿಬ್ಬಂದಿ ಹೊರತೆಗೆದಿದ್ದಾರೆ.
ಗುತ್ತಿಗೆದಾರರು ಕೌಶಲ ಇಲ್ಲದ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದು, ಕನಿಷ್ಠ ಮುನ್ನೆಚ್ಚರಿಕೆಯನ್ನೂ ಕೈಗೊಳ್ಳದ ಕಾರಣ ನಾಲ್ವರು ಬಲಿಯಾಗಿದ್ದಾರೆ ಎಂದು ಸಹ ಕಾರ್ಮಿಕರು ದೂರುತ್ತಾರೆ. ಪೊಲೀಸರು ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.