ದೆಹಲಿಯ ಮಾಧ್ಯಮಗಳು ಪ್ರಭಾವಶಾಲಿ : ಚಿತ್ತರಂಜನ್ ದಾಸ್
ಸುಳ್ಯ,ಆ.14: ದೆಹಲಿಯ ಮಾಧ್ಯಮಗಳು ಅತ್ಯಂತ ಪ್ರಭಾವಶಾಲಿಯಾಗಿದ್ದು, ಹಲವು ಘಟನೆಗಳನ್ನು ಬಯಲು ಮಾಡಿವೆ. ಈ ವಿಷಾರದಲ್ಲಿ ಬೆಂಗಳೂರಿನ ಮಾಧ್ಯಮಗಳ ಕ್ರಮ ಏನೇನೂ ಸಾಲದು ಎಂದು ದೆಹಲಿಯಲ್ಲಿರುವ ಭಾಷಾಂತರಗಾರ ಹಾಗೂ ಸುಳ್ಯ ಮೂಲದ ಪತ್ರಕರ್ತ ಎ.ವಿ.ಚಿತ್ತರಂಜನ್ದಾಸ್ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೆಹಲಿಯ ಮಾಧ್ಯಮ ಹಾಗೂ ರಾಜಕೀಯ ರಂಗಗಳ ಒಳಹೊರಗನ್ನು ಬಿಚ್ಚಿಟ್ಟರು. ತಾನು 12 ವರ್ಷಗಳ ಕಾಲ ದೆಹಲಿ ಆಕಾಶವಾಣಿಯಲ್ಲಿ ವಾರ್ತಾವಾಚಕನಾಗಿ ಕೆಲಸ ಮಾಡಿದ್ದು, ವಾಜಪೇಯಿ ಸರ್ಕಾರ ಬಂದಾಗ ಆಕಾಶವಾಣಿಯನ್ನು ಪ್ರಾದೇಶೀಕರಣಗೊಳಿಸಿತು. ಹಾಗಾಗಿ ದೆಹಲಿಯಿಂದ ಬಿತ್ತರವಾಗುತ್ತಿದ್ದ ಕನ್ನಡ ವಾರ್ತೆಗಳನ್ನು ಸ್ಥಗಿತಗೊಳಿಸಲಾಯಿತು. ಆದರೆ ತಮಿಳು, ಮಲಯಾಳಂ, ಮರಾಠಿಯ ವಾರ್ತೆಗಳೂ ಈಗಲೂ ದೆಹಲಿಯಿಂದಲೇ ಪ್ರಸಾರವಾಗುತ್ತಿವೆ ಎಂದರು. ದೆಹಲಿಯ ಆಮ್ ಆದ್ಮಿ ಸರ್ಕಾರ ವಿಐಪಿ ಸಂಸ್ಕೃತಿಯನ್ನು ತೆಗೆದು ಹಾಕಿದ್ದು, ಸಾಮಾನ್ಯ ಜನರೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದರಿಂದ ಸಾಧ್ಯವಾಗಿದೆ. ನೀರು, ವಿದ್ಯುತ್ ವಿಚಾರದಲ್ಲಿ ಎಎಪಿ ಒಳ್ಳೆಯ ಕೆಲಸ ಮಾಡಿದೆ. ಉಳಿದಂತೆ ಕೆಲಸ ಮಾಡಲು ಅಲ್ಲಿನ ರಾಜ್ಯಪಾಲರ ಮೂಲಕ ಕೇಂದ್ರ ಅಡ್ಡಗಾಲು ಹಾಕುತ್ತಿದೆ ಎಂದವರು ಹೇಳಿದರು. ಕೇಂದ್ರದ ಮೋದಿ ಸರ್ಕಾರವೂ ಒಳ್ಳೆಯ ಕೆಲಸ ಮಾಡಿದೆ. ಸಾಲ ಮನ್ನಾ ಮಾಡುವ ಬದಲು ಬೆಳೆವಿಮೆಯಂತಹ ಒಳ್ಳೆಯ ಯೋಜನೆ ಕೊಟ್ಟಿದೆ. ಹಣವನ್ನು ವ್ಯರ್ಥ ಮಾಡುತ್ತಿಲ್ಲ, ಉಳಿತಾಯ ಮಾಡುತ್ತಿದೆ. ಒಳ್ಳೆಯ ಯೋಜನೆಗಳಿಗೆ ಬಳಕೆ ಮಾಡುತ್ತಿದೆ. ದೆಹಲಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ. ಹಾಗಿದ್ದೂ ದೇಶವನ್ನು ವಿಭಾಗ ಮಾಡಲು ಬಿಜೆಪಿಯ ಒಂದು ವರ್ಗ ಈಗಲೂ ಯತ್ನಿಸುತ್ತಿದೆ ಎಂದವರು ಹೇಳಿದರು.
ಮಾಧ್ಯಮಗಳು ರಾಷ್ಟ್ರ ಬದ್ಧತೆಯಿಂದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಮಾಧ್ಯಮ ಮಿತ್ರರು ಹಗರಣಗಳನ್ನು ಬಯಲಿಗೆ ಎಳೆಯುವ ಕೆಲಸ ಮಾಡಬೇಕೆಂದರು.