ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದಾತನನ್ನು ಬದುಕಿಸಿದ 108 ಆಂಬ್ಯುಲೆನ್ಸ್ ಸಿಬ್ಬಂದಿ
ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಗೆ ಪ್ರಶಂಸೆ
ಬಂಟ್ವಾಳ, ಆ. 15: ರೈಲು ಢಿಕ್ಕಿ ಹೊಡೆದು ಚಿಂತಾಜನಕವಾಗಿ ಹಳಿಯಲ್ಲಿ ಒದ್ದಾಡುತ್ತಿದ್ದ ಯುವಕನೋರ್ವನನ್ನು ಬಿ.ಸಿ.ರೋಡಿನ 108 ಆಂಬ್ಯುಲೆನ್ಸ್ ಚಾಲಕ ಮತ್ತು ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದ ಬದುಕುಳಿದ ಘಟನೆ ರವಿವಾರ ಬಿ.ಸಿ.ರೋಡ್ ರೈಲು ನಿಲ್ದಾಣದ ಬಳಿ ನಡೆದಿದೆ.
ಇಲ್ಲಿನ ಕಲ್ಲಡ್ಕ ನಿವಾಸಿ ರಫೀಕ್(26) ಎಬವರು ನಿನ್ನೆ ಬೆಳಗ್ಗೆ ಬಿ.ಸಿ.ರೋಡ್ ರೈಲು ಹಳಿಯಲ್ಲಿ ಗಂಭೀರ ಅವಸ್ಥೆಯಲ್ಲಿ ಒದ್ದಾಡುತ್ತಿದ್ದರು. ವಿಷಯ ತಿಳಿದ ಸ್ಥಳೀಯರು ತಕ್ಷಣ 108 ಆಂಬ್ಯುಲೆನ್ಸ್ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕ್ಷಣಾರ್ಧದಲ್ಲಿ ಸ್ಥಳಕ್ಕೆ ಆಗಮಿಸಿದ ಬಿ.ಸಿ.ರೋಡ್ 108 ಆಂಬ್ಯುಲೆನ್ಸ್ ವಾಹನದ ಸಿಬ್ಬಂದಿ ಗಾಯಾಳು ಯುವಕನನ್ನು ಆಂಬ್ಯುಲೆನ್ಸ್ನಲ್ಲಿ ಚಿಕಿತ್ಸೆ ನೀಡುತ್ತಾ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಯುವಕ ಚೇತರಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಂಬ್ಯುಲೆನ್ಸ್ ಚಾಲಕ ನಾಗಪ್ಪ, ಸ್ಟಾಪ್ ನರ್ಸ್ ಮಂಜುನಾಥ್ರವರ ಕ್ಷಿಪ್ರ ಕಾರ್ಯಾಚರಣೆ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.