ನಿಟ್ಟೆ: ಬಸ್-ಕಾರು ನಡುವೆ ಢಿಕ್ಕಿ ; ಇಬ್ಬರು ಬಾಲಕರು ಗಂಭೀರ
ಕಾರ್ಕಳ, ಆ.15: ಕಾರು ಹಾಗೂ ಬಸ್ನ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಸದಸ್ಯರ ಪೈಕಿ ಇಬ್ಬರು ಬಾಲಕರಾದ ಹರಾನ್ ಹಾಗೂ ಅಯಾನ್ ಎಂಬವರು ಗಂಬೀರ ಗಾಯಗೊಂಡಿದ್ದು, ಉಳಿದ ನಾಲ್ವರು ಸ್ವಲ್ಪಪ್ರಮಾಣದಲ್ಲಿ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ದೂಪದಕಟ್ಟೆ ಗಣಪತಿ ದೇವಸ್ಥಾನದ ಬಳಿ ಸೋಮವಾರ ಸಂಜೆ ನಡೆದಿದೆ.
ಕಾರ್ಕಳ ಕಡೆಯಿಂದ ಬೆಳ್ಮಣ್ಣು ಕಡೆಗೆ ಚಲಿಸುತ್ತಿದ್ದ ಕಾರು ನಿಟ್ಟೆ ದೂಪದಕಟ್ಟೆಯ ಗಣಪತಿ ದೇವಸ್ಥಾನದ ಬಳಿ ಹೋಗುತ್ತಿದ್ದ ವೇಳೆ ಮುಂದಿನಿಂದ ಚಲಿಸುತ್ತಿದ್ದ ರಿಕ್ಷಾವನ್ನು ಓವರ್ಟೇಕ್ ಮಾಡುವ ಭರಾಟೆಯಲ್ಲಿ ರಿಕ್ಷಾಗೆ ಢಿಕ್ಕಿ ಹೊಡೆದು ಬಳಿಕ ಮುಂದಿನಿಂದ ಬರುತ್ತಿದ್ದ ಬಸ್ಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಬಸ್ನ ಅಡಿಭಾಗದಲ್ಲಿ ಸಿಲುಕಿಕೊಂಡಿತ್ತು. ಇದರಿಂದಾಗಿ ಗಾಯಾಳುಗಳನ್ನು ಹೊರಗೆಳೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು ಎಂದು ತಿಳಿದುಬಂದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬೆಳ್ಮಣ್ಣು ಸಮೀಪದ ಜಂತ್ರದ ನಿವಾಸಿಗಳು ಎಂದು ತಿಳಿದು ಬಂದಿದೆ. ಗಾಯಾಳುಗಳಾದ ಸರ್ಪುದ್ದೀನ್, ಪ್ರಯಾಣಿಕರಾದ ಹಾಜಿರಾಬಿ ಹಾಗೂ ಸಬೀನಾ ಎಂಬವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.