ಕದ್ರಿ ಪಾರ್ಕ್ ಪುಟಾಣಿ ರೈಲು ನಿರ್ಮಾಣ ಹಂತದಲ್ಲಿ!
ಈ ಬಾರಿ ಮಕ್ಕಳ ದಿನಾಚರಣೆಗಾದರೂ ಓಡಾಟ ಆರಂಭಿಸುವುದೇ?
ಮಂಗಳೂರು, ಆ.16: ನಗರದ ಕದ್ರಿ ಪಾರ್ಕ್ನಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ ಪುಟಾಣಿ ರೈಲು ಸ್ಥಗಿತಗೊಂಡು ಸುಮಾರು ಮೂರು ವರ್ಷಗಳಾಗುತ್ತಿವೆ. ಇದೀಗ ನೂತನ ಪುಟಾಣಿ ರೈಲು ನಿರ್ಮಾಣ ಕಾರ್ಯ ಮೈಸೂರಿನಲ್ಲಿ ಆರಂಭಗೊಂಡಿದ್ದು, ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆ (ನವೆಂಬರ್ 14)ಯ ವೇಳೆಗೆ ಓಡಾಟ ಆರಂಭಿಸುವ ಲಕ್ಷಣಗಳು ಗೋಚರಿಸಿವೆ.
ಎಲ್ಲವೂ ಅಂದುಕೊಂಡಂತೆ ಆದಲ್ಲಿ, ಕದ್ರಿ ಪಾರ್ಕ್ನ ಪುಟಾಣಿ ರೈಲಿನ ಈಗಿರುವ ಹಳಿಗಳ ದುರಸ್ತಿಯೊಂದಿಗೆ ಒಟ್ಟು ಸಮಾರು 70 ಲಕ್ಷ ರೂ. ವೆಚ್ಚದಲ್ಲಿ ಸದ್ಯ ನಿರ್ಮಾಣ ಆರಂಭಿಸಿರುವ ನೂತನ ಪುಟಾಣಿ ರೈಲು ಅಕ್ಟೋಬರ್ ನವೆಂಬರ್ ವೇಳೆಗೆ ಕದ್ರಿಪಾರ್ಕ್ನಲ್ಲಿ ಆರಂಭಿಸುವ ಸಾಧ್ಯತೆ ಇದೆ.
‘‘ನವೆಂಬರ್ನೊಳಗೆ ಪುಟಾಣಿ ರೈಲು ಕದ್ರಿ ಪಾರ್ಕ್ನಲ್ಲಿ ಓಡಾಡಬೇಕೆಂಬುದು ನಮ್ಮ ಆಶಯ ಕೂಡಾ. ಈ ಬಗ್ಗೆ ಗ್ಯಾರಂಟಿಯಂತೂ ಕೊಡಲಾಗದು. ಶಿವಮೊಗ್ಗದ ಬಾಲವನದ ಪುಟಾಣಿ ರೈಲಿನ ಮಾದರಿಯಲ್ಲಿ ನಗರದಲ್ಲಿ ಪುಟಾಣಿ ರೈಲು ರೂಪುಗೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಡಿ ಟೆಂಡರ್ ಕರೆದು, ಮೈಸೂರಿನಲ್ಲಿ ಈಗಾಗಲೇ ರೈಲು ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಹೈಡ್ರಾಲಿಕ್ ಇಂಜಿನ್ ಪುಟಾಣಿ ರೈಲು ನಿರ್ಮಾಣವಾಗಲಿದೆ. ಕೇಂದ್ರ ರೈಲ್ವೇ ಇಲಾಖೆಯಡಿ ರೈಲು ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದರ ಜತೆಯಲ್ಲೇ ಹಳಿಯನ್ನೂ ಸರಿಪಡಿಸಬೇಕಾಗಿದೆ’’ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
4.97 ಕೋಟಿ ರೂ. ವೆಚ್ಚದ ಸಂಗೀತ ಪಾರ್ಕ್
ಕದ್ರಿ ಉದ್ಯಾನವನರದ ಎದುರಿನ ಜಾಗದಲ್ಲಿ 4.97 ಕೋಟಿ ರೂ. ವೆಚ್ಚದ ಸಂಗೀತ ಪಾರ್ಕ್ ಕೆಲವೇ ತಿಂಗಳಲ್ಲಿ ನಿರ್ಮಾಣವಾಗಲಿದೆ. ಯೋಜನೆ ಸಿದ್ಧಗೊಳ್ಳುತ್ತಿದೆ. ಪಾರ್ಕ್ ಕಾನೂನುಗಳಿದ್ದರೂ ಅಭಿವೃದ್ಧಿಯ ಸಂದರ್ಭ ಕೆಲವೊಂದು ಕೆಲಸಗಳು ಜತೆಯಾಗಿ ಸಾಗಬೇಕಾಗಿದೆ. ಬಹು ವರ್ಷಗಳ ಹಿಂದೆ ಮೃಗಾಲಯ ಕೂಡಾ ಕದ್ರಿ ಪಾರ್ಕ್ನಲ್ಲಿದ್ದ ಕಾರಣ ಈ ಪಾರ್ಕ್ ಜನಾಕರ್ಷಣೆಯ ಕೇಂದ್ರವಾಗಿತ್ತು. ಅದೀಗ ಪಿಲಿಕುಳ ಡಾ. ಶಿವರಾಮ ಕಾರಂತ ನಿಸರ್ಗಧಾಮಕ್ಕೆ ಸ್ಥಳಾಂತರಗೊಂಡ ಬಳಿಕ ಕದ್ರಿ ಪಾರ್ಕ್ನ ಆಕರ್ಷಣೆಗೆ ಸಂಗೀತ ಪಾರ್ಕ್ನಂತಹ ಯೋಜನೆಗಳು ರೂಪುಗೊಳ್ಳಬೇಕಿದೆ ಎಂದು ಶಾಸಕ ಜೆ.ಆರ್. ಲೋಬೊ ಅಭಿಪ್ರಾಯಿಸಿದ್ದಾರೆ.
ನಗರದ ಕದ್ರಿ ಪಾರ್ಕ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸಂಗೀತ ಪಾರ್ಕ್ ಹಾಗೂ ಪುಟಾಣಿ ರೈಲು ಓಡಾಟ ಆರಂಭಿಸಿದರೆ ಪಾರ್ಕ್ಗೆ ಜನಾಕರ್ಷಣೆ ಇನ್ನಷ್ಟು ಹೆಚ್ಚಲಿದೆ. ನಗರದಲ್ಲಿ ಜನರಿಗೆ ಮನರಂಜನೆಗಾಗಿ ಹಾಗೂ ಒಂದಿಷ್ಟು ಬಿಡುವಿನ ಹೊತ್ತನ್ನು ಕಳೆಯಲು ಉಳಿದಿರುವ ಕೆಲ ಮಾತ್ರ ಸ್ಥಳಗಳಲ್ಲಿ ಕದ್ರಿ ಪಾರ್ಕ್ ಪ್ರಮುಖವಾಗಿದ್ದು, ಇದರ ಅಭಿವೃದ್ಧಿಗಾಗಿ ದ.ಕ. ಜಿಲ್ಲಾಧಿಕಾರಿ ನೇತೃತ್ವದ ಸೊಸೈಟಿ ಕೂಡಾ ರಚನೆಯಾಗಬೇಕಾಗಿದೆ ಎಂದು ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಗೆ ಲಭ್ಯವಾಗಿರುವ ಅಮೃತ ಯೋಜನೆ ಹಾಗೂ ಎಸ್ಎಫ್ಸಿ ನಿಧಿಯಲ್ಲಿ ಸುಮಾರು 2.5 ಕೋಟಿ ರೂ.ಗಳನ್ನು ಕದ್ರಿಪಾರ್ಕ್ನ ಎದುರಿನ ರಸ್ತೆ ಹಾಗೂ ಇತರ ಅಭಿವೃದ್ದಿ ಕಾರ್ಯಗಳಿಗೆ ಮೀಸಲಿರಿಸಲಾಗಿದೆ. ಪಾರ್ಕ್ ನಿರ್ವಹಣೆಯನ್ನು ನೋಡುತ್ತಿರುವ ತೋಟಗಾರಿಕಾ ಇಲಾಖೆಯಲ್ಲಿ ಹಣದ ಕೊರತೆಯಿಂದ ಈ ಕಾರ್ಯವನ್ನು ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ವತಿಯಿಂದ ನಿರ್ವಹಿಸಬೇಕಾಗಿದೆ. ಕದ್ರಿ ಪಾರ್ಕ್ನ ಕಾರ್ನರ್ ಒಂದರಲ್ಲಿ ವಿಕಲಚೇತನರಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗುವುದು. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆ ಸಿದ್ಧಗೊಳ್ಳುತ್ತಿದೆ ಎಂದು ಜೆ.ಆರ್. ಲೋಬೊ ವಿವರಿಸಿದ್ದಾರೆ.
ಪಾಳು ಬಿದ್ದ ಭೂಮಿ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಲಹೆ
ಪಾಕ್ನ ಹಿಂದುಗಡೆ ಇರುವ ಸುಮಾರು 6 ಎಕರೆ ಭೂಮಿ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಆಗಿಲ್ಲ. ನಗರದ ಪ್ರಮುಖ ಭಾಗದಲ್ಲಿರುವ ಸರಕಾರದ ಇಷ್ಟೊಂದು ಜಾಗ ವಿನಿಯೋಗಿಸದಿರುವುದು ಖೇದಕರ. ಈ ಬಗ್ಗೆ ಸೂಕ್ತ ಯೋಜನಾ ವರದಿಯೊಂದನ್ನು ಜಿಲ್ಲಾ ಪಂಚಾಯತ್ ವತಿಯಿಂದ ಸಿದ್ಧಪಡಿಸಿ ನೀಡಿದ್ದಲ್ಲಿ ಯೋಜನೆಗೆ ಸರಕಾರದಿಂದ ಅನುದಾನ ಒದಗಿಸುವುದಾಗಿ ಐವನ್ ಡಿಸೋಜ ತಿಳಿಸಿದರು.