ಮದರ್ ತೆರೆಸಾರ ಪುತ್ಥಳಿ ಅನಾವರಣ
ಉಡುಪಿ, ಆ.16: ಮದರ್ ತೆರೆಸಾ ಸಾರಿದ ಮಾನವೀಯತೆಯ ಗುಣ ಇಂದಿನ ಅಸಮಾನತೆ, ಅಶಾಂತಿಯಿಂದ ಕೂಡಿದ ಸಮಾಜಕ್ಕೆ ದಾರಿದೀಪವಾಗ ಬೇಕಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಭಿಪ್ರಾಯಪಟ್ಟಿದ್ದಾರೆ.
ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆಯ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಪುನೀತೆ ಮದರ್ ತೆರೆಸಾ ಅವರ ಪುತ್ಥಳಿ ಅನಾವರಣ ಮತ್ತು ಆಶೀರ್ವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮದರ್ ತೆರೆಸಾ ತನ್ನ ನಿಸ್ವಾರ್ಥ ಹಾಗೂ ಮಾನವೀಯ ಸೇವೆಯ ಮೂಲಕ ದೇಶಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದು ಕೊಡುವುದರೊಂದಿಗೆ ಭಾರತದೆಡೆಗೆ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದರು. ದೀನ ದಲಿತರು, ಅಶಕ್ತರಿಗೆ ಅವರು ಮಾಡಿದ ಸೇವೆ ನಿಜಕ್ಕೂ ಮಾನವೀಯತೆಯನ್ನು ಕಲಿಸುವ ದಾರಿಯಾಗಿತ್ತು ಎಂದು ಸೊರಕೆ ನುಡಿದರು.
ಶಿರ್ವ ಆರೋಗ್ಯ ಮಾತಾ ಚರ್ಚ್ನ ಧರ್ಮಗುರು ಹಾಗೂ ವಲಯ ಪ್ರಧಾನ ಧರ್ಮಗುರು ವಂ.ಸ್ಟ್ಯಾನಿ ತಾವ್ರೊ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪುತ್ಥಳಿಯ ದಾನಿಗಳಾದ ಮುಹಮ್ಮದ್ ಕಿಜರ್ ಶೇಕ್ಗೋಡು ಹಾಗೂ ಸಿರಿಲ್ ನೊರೊನ್ಹಾರನ್ನು ಮಾನಸ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಕೆಥೊಲಿಕ್ ಉಡುಪಿ ಪ್ರದೇಶ್ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಮಂಗಳೂರು ಪ್ರದೇಶ ಅಧ್ಯಕ್ಷ ಅನಿಲ್ ಲೋಬೊ, ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್, ಕಾರ್ಯದರ್ಶಿ ಇರ್ವಿನ್ ಡಿಸೋಜ, ಕೋಶಾಧಿಕಾರಿ ಎಲ್ರೊಯ್ ಕಿರಣ್ ಕ್ರಾಸ್ತ್ತಾ, ಆಡಳಿತಾಧಿಕಾರಿ ಜೋಸೆಫ್ ನೊರೊನ್ಹಾ, ಶಿರ್ವ ಡಾನ್ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ. ಮಹೇಶ್ ಡಿಸೋಜ, ಮಾಜಿ ಅಧ್ಯಕ್ಷೆ ರೆಮೆಡಿಯಾ ಡಿಸೋಜ, ವಲಯ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೋನ್ಸಾಲ್ವಿಸ್ ಸ್ವಾಗತಿಸಿದರು. ಟ್ರಸ್ಟಿ ಥೋಮಸ್ ಕ್ವಾಡ್ರಸ್ ವಂದಿಸಿದರು. ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಸಿದರು.