ಬಿಜೆಪಿಯಿಂದ ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ: ಐವನ್ ಡಿಸೋಜ
ಉಪ್ಪಿನಂಗಡಿ, ಆ.17: 2017ರಲ್ಲಿ ನಡೆಯುವ ಗೋವಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಮಹಾದಾಯಿ ಹೋರಾಟದಲ್ಲಿಯೂ ರಾಜಕೀಯ ನಡೆಸುತ್ತಿದ್ದು, ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನಡೆಯನ್ನು ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜ ಗಂಭೀರ ಆರೋಪ ಮಾಡಿದ್ದಾರೆ.
ಇಲ್ಲಿನ ಹೊಟೇಲ್ ಆದಿತ್ಯದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ, ಮಹಾರಾಷ್ಟ್ರದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ, ಮಹಾದಾಯಿ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಬಿಜೆಪಿಯನ್ನು ಪ್ರತಿನಿಧಿಸುವ ರಾಜ್ಯದ ಸಂಸದರೂ ಮಹಾದಾಯಿ ಸಮಸ್ಯೆ ಪರಿಹಾರಕ್ಕೆ ಸಂಸತ್ತಿನಲ್ಲಿ ಧ್ವನಿಯೆತ್ತಿಲ್ಲ. ಒಂದೆಡೆ ಬಿಜೆಪಿಯ ರಾಜ್ಯ ನಾಯಕರುಗಳು ಎತ್ತಿನಹೊಳೆ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ಇಲ್ಲಿನ ಸಂಸದರು ಎತ್ತಿನ ಹೊಳೆ ಯೋಜನೆ ವಿರೋಧಿಸಿ ಇಲ್ಲಿನ ಸಂಸದರು ಜಾಥಾ ನಡೆಸುತ್ತಾರೆ. ಇದೆಲ್ಲಾ ಬಿಜೆಪಿಯ ರಾಜಕೀಯ ನಾಟಕ ಎಂದರು.
ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಆದರೆ ಇದನ್ನು ಸಹಿಸದ ಬಿಜೆಪಿಯು ಕೆಲವು ಸಮಾಜವಿರೋಧಿ ಶಕ್ತಿಗಳಿಗೆ ಬೆಂಬಲ ನೀಡುವ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಆಡಳಿತ ನಡೆಸುವಾಗ ಕೆಲವೊಂದು ತಪ್ಪುಗಳಾಗುವುದು ಸಹಜ. ಆದರೆ, ವಿರೋಧ ಪಕ್ಷವಾಗಿರುವ ಬಿಜೆಪಿಯು ಆ ತಪ್ಪುಗಳನ್ನು ತಿಳಿಸಿ ಆಡಳಿತವನ್ನು ಸರಿದಾರಿಗೆ ತರುವ ಕೆಲಸ ಮಾಡದೇ ಒಳಸಂಚು ರೂಪಿಸುವ ಮೂಲಕ ಸರಕಾರಕ್ಕೆ ಅಪಕೀರ್ತಿ ತರಲು ಪ್ರಯತ್ನಿಸುತ್ತಿದೆ ಎಂದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಐವನ್ ಡಿಸೋಜಾ, ಜಿಲ್ಲೆಯ ಜನತೆಗೆ ತೊಂದರೆಯಾಗದಂತೆ ಕುಡಿಯುವ ನೀರು ನೀಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಎತ್ತಿನಹೊಳೆ ಕಾಮಗಾರಿ ಪಾರದರ್ಶಕವಾಗಿ ನಡೆಯದಿದ್ದರೆ ಅದನ್ನು ನಾನು ವಿರೋಧಿಸುತ್ತೇನೆ ಎಂದರಲ್ಲದೆ, ಈ ಭಾಗದ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗುವ ಪಶ್ಚಿಮ ವಾಹಿನಿ ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕೆ ಸರಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಬಿಜೆಪಿಯವರಿಗೆ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಬೇಕಿತ್ತೇ ಹೊರತು ಅವರಿಗೆ ಗಣಪತಿ ಕುಟುಂಬದ ಬಗ್ಗೆ ಕಾಳಜಿ ಇರಲಿಲ್ಲ. ಡಿವೈಎಸ್ಪಿ ಗಣಪತಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಎಂದು ಬೊಬ್ಬಿಡುತ್ತಿರುವ ಬಿಜೆಪಿ ನಾಯಕರುಗಳು ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣ ತನಿಖೆಯನ್ನು ಸಿಬಿಐಗೆ ನೀಡಿ ಒಂದೂವರೆ ವರ್ಷವಾದರೂ ಆ ತನಿಖೆಯ ಗತಿಯೇನಾಯಿತು ಎಂಬ ಬಗ್ಗೆ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ ಐವನ್ ಡಿಸೋಜ, ರಾಜ್ಯ ಬಿಜೆಪಿ ನಾಯಕರುಗಳಲ್ಲೇ ಒಮ್ಮತವಿಲ್ಲ. ನಿನ್ನೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಇದು ಬಹಿರಂಗಗೊಂಡಿದ್ದು, ಎಲ್ಲಾ ವರ್ಗದ ಜನರ ಹಿತರಕ್ಷಣೆ ಬಿಜೆಪಿಯಿಂದ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಈಶ್ವರಪ್ಪನವರು ‘ಹಿಂದ’ ಸಂಘಟನೆಗೆ ಮುಂದಾದರೆ, ಯಡಿಯೂರಪ್ಪನವರು ಅದನ್ನು ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂದು ‘ಅಹಿಂದ’ ಸಂಘಟನೆ ರೂಪಿಸಿದಾಗ ಅದನ್ನು ಬಲವಾಗಿ ವಿರೋಧಿಸಿದ್ದ ಬಿಜೆಪಿಯ ಕೆಲವರು ಈಗ ‘ಹಿಂದ’ ಸಂಘಟನೆಗೆ ಮುಂದಾಗಿದ್ದಾರೆ. ಬಿಜೆಪಿಯೊಳಗಿರುವ ಈ ರೀತಿಯ ಗೊಂದಲದಿಂದಾಗಿ ಬಿಜೆಪಿಯ ತತ್ವ ಸಿದ್ಧಾಂತದಲ್ಲಿ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ. ಬಿಜೆಪಿಯವರು ವಿಷನ್ 150 ಎನ್ನುವ ಮೂಲಕ ಬಿಜೆಪಿ ಅಧಿಕಾರಕ್ಕೆ ಕಣ್ಣಿಟ್ಟಿದೆಯೇ ಹೊರತು ರಾಜ್ಯದ ಅಭಿವೃದ್ಧಿಗಲ್ಲ. ಇದನ್ನು ಜನಸಾಮಾನ್ಯ ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸಲು ದ.ಕ. ಜಿಲ್ಲೆಯಲ್ಲಿ 5 ವಸ್ತ್ರೋದ್ಯಮ ಕಾರ್ಖಾನೆ(ಗಾರ್ಮೆಂಟ್ಸ್)ಗಳನ್ನು ಸ್ಥಾಪಿಸಲು ನಾನು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇದರಿಂದ ಒಂದು ಕಾರ್ಖಾನೆಯಲ್ಲಿ 5 ಸಾವಿರದಂತೆ ಒಟ್ಟು 25 ಸಾವಿರ ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದು ತಿಳಿಸಿದ ಐವನ್ ಡಿಸೋಜ, 94ಸಿಯಡಿ ಅರ್ಜಿ ಸಲ್ಲಿಸುವ ಅವಧಿಂುನ್ನು ಇನ್ನಷ್ಟು ವಿಸ್ತರಿಸಲಾಗುವುದು. ಅಲ್ಲದೇ, 94ಸಿಯಡಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವುದಕ್ಕಾಗಿ ವಿಶೇಷ ತಹಶೀಲ್ದಾರ್ ಅವರನ್ನೊಳಗೊಂಡ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲು ಈಗಾಗಲೇ ತಾನು ಕಂದಾಯ ಸಚಿವರಿಗೆ ಸಲಹೆ ನೀಡಿದ್ದು, ಇದು ರಚನೆಯಾದರೆ, 94ಸಿಯಡಿ ಹಕ್ಕುಪತ್ರ ನೀಡುವ ಕೆಲಸಗಳು ವಿಳಂಬವಾಗುವುದು ತಪ್ಪುತ್ತದೆ ಎಂದರು.
8.37 ಲಕ್ಷ ರೂ. ವೆಚ್ಚದಲ್ಲಿ ಪೆರಾಬೆ ಗ್ರಾಮದಲ್ಲಿ ಎಂಡೋಸಲ್ಫಾನ್ ಸಂತ್ರಸ್ತ 40 ಕುಟುಂಬಗಳಿಗೆ ಸೋಲಾರ್ ಅಳವಡಿಸಲಾಗಿದ್ದು, ಒಂದು ಸೋಲಾರ್ ಯುನಿಟ್ಗೆ 2.70 ಲಕ್ಷ ರೂ.ವೆಚ್ಚದಲ್ಲಿ 50 ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸೋಲಾರ್ ಎನರ್ಜಿ ಯುನಿಟ್ ಅಳವಡಿಸಲಾಗಿದೆ. ಹೀಗೆ ತಾನು ವಿಧಾನ ಪರಿಷತ್ ಸದಸ್ಯನಾದ ಬಳಿಕ ನಾಲ್ಕು ಕೋಟಿಗೂ ಅಧಿಕ ಅನುದಾನವನ್ನು ಜಿಲ್ಲೆಗೆ ನೀಡಿದ್ದೇನೆ ಎಂದು ಐವನ್ ಡಿಸೋಜ ತಿಳಿಸಿದರು.
ಸರಕಾರಿ ಅಧಿಕಾರಿಗಳು ಸರಕಾರದ ಒಂದು ಮುಖವಾಗಿದ್ದು, ಅವರಿಗೆ ಅವರದ್ದೇ ಆದ ಶಿಸ್ತು, ನೀತಿ- ನಿಯಮಗಳಿವೆ. ಅದನ್ನು ಎಲ್ಲರೂ ಪಾಲಿಸುವುದು ಅತೀ ಮುಖ್ಯ. ಎಲ್ಲದಕ್ಕೂ ರಾಜೀನಾಮೆ ಪರಿಹಾರ ಅಲ್ಲ. ಸಮಸ್ಯೆಗಳಿದ್ದರೆ ಅದನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕು. ಆದರೆ ಕೆಲವು ಅಧಿಕಾರಿಗಳು ನಿಯಮ ಮೀರಿ ವರ್ತಿಸುವ ಮೂಲಕ ರಾಜಕೀಯ ನಡೆಸುತ್ತಿದ್ದಾರೆ. ಇದರಿಂದ ಈ ರೀತಿಯಾಗುತ್ತಿದೆ ಎಂದು ರಾಜೀನಾಮೆ ನೀಡಿದ ಡಿವೈಎಸ್ಪಿ ಅನುಪಮ ಶೆಣೈ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಐವನ್ ಡಿಸೋಜ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ರಘುನಾಥ್ ರೈ ಅಲಿಮಾರ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಯು.ಟಿ. ತೌಸೀಫ್, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ನಝೀರ್ ಮಠ, ಯುವ ಕಾಂಗ್ರೆಸ್ನ ವಲಯಾಧ್ಯಕ್ಷ ಶಬೀರ್ ಕೆಂಪಿ ಹಾಗೂ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಉಪಸ್ಥಿತರಿದ್ದರು.