ವಾಲಿದ ಶಾಲೆಯ ಮೇಲ್ಛಾವಣಿ: ವಿದ್ಯಾರ್ಥಿಗಳಲ್ಲಿ ಆತಂಕ
ಉಪ್ಪಿನಂಗಡಿ, ಆ.17: ಹೊಸಗದ್ದೆಯಲ್ಲಿರುವ ಸ.ಹಿ.ಪ್ರಾ. ಶಾಲಾ ಕಟ್ಟಡದ ಮೇಲ್ಛಾವಣಿಯು ಒಂದು ಬದಿಗೆ ವಾಲಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.
ಬಜತ್ತೂರು ಗ್ರಾಮದ ಹೊಸಗದ್ದೆ ಶಾಲೆಯ ಹಂಚಿನ ಮಾಡು ಕಳೆದೆರಡು ದಿನಗಳ ಹಿಂದೆ ಸುರಿದ ಗಾಳಿ ಮಳೆಯಿಂದ ಒಂದು ಬದಿಗೆ ವಾಲಿದೆ. 1962ರಲ್ಲಿ ಈ ಶಾಲಾ ಕಟ್ಟಡದ ಎರಡು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಬಳಿಕ ಇದೇ ಕಟ್ಟಡಕ್ಕೆ ಸೇರಿಸಿ, ಹಲವು ಕೊಠಡಿಗಳನ್ನು ನಿರ್ಮಿಸಲಾಗಿದೆ. ಹಳೆಯ ಕೊಠಡಿಯ ಮರದ ಮೇಲ್ಛಾವಣಿಗೆ ಸೇರಿಸಿಯೇ ಹೊಸದಾಗಿ ರಚಿಸಿದ ಕೊಠಡಿಗಳಿಗೂ ಮೇಲ್ಛಾವಣಿ ನಿರ್ಮಿಸಲಾಗಿದೆ. ಶಾಲೆಯ ಮೇಲ್ಛಾವಣಿ ಕುಸಿಯುವ ಸಾಧ್ಯತೆಯನ್ನು ಮನಗಂಡ ಶಿಕ್ಷಕರು ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳನ್ನು ಅದೇ ಕಟ್ಟಡದ ಇನ್ನೊಂದು ಕೊಠಡಿಗೆ ಸ್ಥಳಾಂತರಿಸಿದ್ದಾರೆ. ಅಲ್ಲದೆ, ಮೇಲ್ಛಾವಣಿ ವಾಲಿರುವ ಬದಿಯ ವಾಲ್ಪ್ಲೇಟ್ಗೆ ಮರದ ಹಾಗೂ ಕಬ್ಬಿಣದ ತುಂಡುಗಳ ಆಧಾರವನ್ನು ನೀಡಿದ್ದಾರೆ.
ಸುದ್ದಿ ತಿಳಿದು ಬಜತ್ತೂರು ಗ್ರಾಪಂ ಸದಸ್ಯ ಸಂತೋಷ್ ಕುಮಾರ್ ಪಂರ್ದಾಜೆ, ಗ್ರಾಪಂ ಸದಸ್ಯ ಗಣೇಶ್ ಕಿಂಡೋವು, ಜಗದೀಶ್ ರಾವ್ ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.