ವ್ಯಾಪಾರಿಯ ಕೊಲೆಯತ್ನ ಆರೋಪಿ ಸೆರೆ
ಕಾಸರಗೋಡು, ಆ.22: ನಗರದ ಚಂದ್ರಗಿರಿ ಜಂಕ್ಷನ್ ಬಳಿಯ ಜವುಳಿ ವ್ಯಾಪಾರಿಯೊಬ್ಬರನ್ನು ಕತ್ತಿಯಿಂದ ಇರಿದು ಕೊಲೆಗೆತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೀತಾಂಗೋಳಿ ಮುಗು ರಸ್ತೆ ನಿವಾಸಿ ಜವುಳಿ ವ್ಯಾಪಾರಿ ಇಬ್ರಾಹೀಂ ಶಮಾಸ್ ಎಂಬವರನ್ನು ಕತ್ತಿಯಿಂದ ಇರಿದು ಕೊಲೆಗೆ ಯತ್ನಿಸಿದ ಅಣಂಗೂರು ನಿವಾಸಿ ಪಿ.ಎ.ಖೈಸಲ್ ಎಂಬಾತನನ್ನು ನಿನ್ನೆ ಸೆರೆಹಿಡಿಯಲಾಗಿದೆ. ಈತ ಕೊಲೆ ಸಹಿತ ಇತರ ಏಳು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಜು.28ರಂದು ರಾತ್ರಿ 8:30ಕ್ಕೆ ಚಂದ್ರಗಿರಿ ಜಂಕ್ಷನ್ನಲ್ಲಿ ಘಟನೆ ನಡೆದಿದ್ದು, ಅಂಗಡಿ ಮುಚ್ಚಿ ತೆರಳುತ್ತಿದ್ದಾಗ ಆಕ್ರಮಿಸಿ ಕೊಲೆಗೆ ಯತ್ನಿಸಲಾಗಿತ್ತೆಂದು ದೂರಲಾಗಿದೆ. ಚಂದ್ರಗಿರಿ ಜಂಕ್ಷನ್ನ ರಸ್ತೆಬದಿ ಆಟೊರಿಕ್ಷಾವನ್ನು ನಿಲ್ಲಿಸಿದಾಗ ದಾರಿಗೆ ಅಡ್ಡವಾಯಿತೆಂದು ಈ ಬಗ್ಗೆ ಇಬ್ರಾಹೀಂ ಖೈಸಲ್ನಲ್ಲಿ ಪ್ರಶ್ನಿಸಿದನೆನ್ನಲಾಗಿದೆ. ಇದುವೇ ಆಕ್ರಮಣಕ್ಕೆ ಕಾರಣವೆನ್ನಲಾಗಿದೆ. 2011ರಂದು ನಗರದ ಆಟೊ ಚಾಲಕ ಉಪೇಂದ್ರನನ್ನು ಕೊಲೆಗೈದ ಪ್ರಕರಣ, 2010ರಲ್ಲಿ ಎರಡು ಕೊಲೆಯತ್ನ ಪ್ರಕರಣ, 2012ರಲ್ಲಿ ಆಕ್ರಮಣ, 2013ರಲ್ಲಿ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಆಕ್ರಮಣ ಮೊದಲಾದ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.