ಬೈಕಿಗೆ ಲಾರಿ ಡಿಕ್ಕಿ ಪಂಜಿನಡ್ಕ ನಿವಾಸಿ ಗಂಭೀರ
ಮುಲ್ಕಿ,ಆ.22:ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿಯ ಬಪ್ಪನಾಡು ಜಂಕ್ಷನ್ ಬಳಿ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕಿಗೆ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಲಾರಿ ಡಿಕ್ಕಿಯಾಗಿ ಬೈಕು ಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.ಗಾಯಗೊಂಡ ಬೈಕು ಸವಾರನನ್ನು ಅತಿಕಾರಿಬೆಟ್ಟು ಗ್ರಾಮದ ಪಂಜಿನಡ್ಕ ನಿವಾಸಿ ಹೇಮರಾಜ್ ಸಾಲಿಯಾನ್ ಎಂದು ಗುರುತಿಸಲಾಗಿದೆ.
ಮೂಲತ: ಇಲೆಕ್ಟ್ರೀಶಿಯನ್ ಆಗಿರುವ ಹೇಮರಾಜ ಬಪ್ಪನಾಡು ಜಂಕ್ಷನ್ ಬಳಿ ತನ್ನ ಬೈಕಿನಲ್ಲಿ ಮುಲ್ಕಿ ಕಾಲೇಜಿನ ಒಳರಸ್ತೆ ತಿರುಗಿಸುವ ವೇಳೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ಬೈಕು ಸವಾರನ ಹೆಲ್ಮೆಟ್ ರಟ್ಟಿ ಹೋಗಿದ್ದು ತಲೆ ಗಂಭೀರ ಗಾಯಗಳಾಗಿದೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯವಾಗಿದ್ದು ಮಂಗಳೂರು ಉತ್ತರ ಸಂಚಾರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಸಂಚಾರ ಸುಗಮಗೊಳಿಸಿದರು.ಕಳೆದ ಕೆಲ ತಿಂಗಳಿನಿಂದ ಬಪ್ಪನಾಡು ರಾಷ್ಟ್ರೀಯ ಹೆದ್ದಾರಿ ಅಪಘಾತವಲಯ ಎಂದು ಪರಿಗಣಿಸಿದ್ದರೂ ಸ್ಥಳೀಯ ಅಡಳಿತ ಮೌನವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.