ಗೋರಕ್ಷಣೆ ಹೆಸರಿನಲ್ಲಿ ದುಷ್ಕೃತ್ಯ ಎಸಗುತ್ತಿರುವವರ ಬಗ್ಗೆ ಎಚ್ಚರದಿಂದಿರಿ
ಸಚಿವ ರಮಾನಾಥ ರೈ ಜನತೆಗೆ ಕರೆ
ಮಂಗಳೂರು, ಆ.23: ಧರ್ಮ, ದೇವರ ಹೆಸರಿನಲ್ಲಿ ಕೆಲವು ಶಕ್ತಿಗಳು ಸಮಾಜದಲ್ಲಿ ಹಿಂಸೆ, ಅಶಾಂತಿ ಉಂಟು ಮಾಡುತ್ತಿರುವುದು ನೋವಿನ ವಿಚಾರ. ಗೋರಕ್ಷಣೆಯ ಹೆಸರಿನಲ್ಲಿ ನಾಗರಿಕ ಸಮಾಜದ ಸಾಮರಸ್ಯ ಕೆಡಿಸುತ್ತಿರುವುದು ಮಾತ್ರವಲ್ಲ ಇದೀಗ ಜೀವವನ್ನೇ ಬಲಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ದ.ಕ. ಮತ್ತು ಉಡುಪಿಯ ಜಿಲ್ಲೆಗಳಲ್ಲಿ ಇಂತಹ ಹಲವು ಪ್ರಕರಣಗಳು ನಡೆಯುತ್ತಿವೆ. ಇಂತಹ ದುಷ್ಟಶಕ್ತಿಗಳ ಬಗ್ಗೆ ಪ್ರಜ್ಞಾವಂತ ನಾಗರಿಕರು ಅರಿತುಕೊಳ್ಳಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆಯನ್ನು ಖಂಡಿಸಿದ ಸಚಿವರು, ಇಂತಹ ಕೃತ್ಯ ಎಸಗುತ್ತಿರುವ ಅವರನ್ನು ತಾನು ಸಂಘಪರಿವಾರ ಎಂದು ಕರೆಯುವುದಿಲ್ಲ. ಅವರು 'ಚಡ್ಡಿ ಪರಿವಾರ' ಎಂದರು.
ಗೋರಕ್ಷಕರಲ್ಲಿ ಶೇ.80ರಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆಯವರು ಎಂದು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಹೇಳಿದ್ದಾರೆ. ಆದರೆ ಇದನ್ನು ಈ ಹಿಂದೆಯೇ ನಾವು ಹೇಳಿದ್ದೇವೆ. ಕರಾವಳಿ ಜಿಲ್ಲೆಯಲ್ಲಿ ಗೋರಕ್ಷಕರು ಎಂದು ಕಾರ್ಯಾಚರಿಸುತ್ತಿರುವವರು ಬಜರಂಗ ದಳದವರು. ಇವರಲ್ಲಿ ಶೇ. 80ಕ್ಕೂ ಅಧಿಕ ಮಂದಿ ಕ್ರಿಮಿನಲ್ ಹಿನ್ನೆಲೆಯಿಂದ ಬಂದವರು ಎಂದು ಸಚಿವ ರೈ ಹೇಳಿದರು.
ಈ ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಸಾಕಷ್ಟು ಮಂದಿ ಶಾಸಕರಾಗಿದ್ದಾರೆ. ಧರ್ಮ, ದೇಶ ಪ್ರೇಮದ ಹೆಸರನಲ್ಲಿ ಮತೀಯ ಭಾವನೆ ಕೆರಳಿಸಿ ಅಧಿಕಾರಕ್ಕೇರಿದ್ದಾರೆ. ಇದ್ನನು ಪ್ರಜ್ಞಾವಂತ ನಾಗರಿಕರು ಅರಿತುಕೊಳ್ಳಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು. ಕೆಂಜೂರು ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐಜಿಯೊಂದಿಗೆ ಮಾತುಕತೆ ನಡೆಸುತ್ತೇನೆ. ಈ ಪ್ರಕರಣದ ತ್ವರಿತ ಹಾಗೂ ಸಮಗ್ರ ತನಿಖೆಗೆ ಆಗ್ರಹಿಸುವುದಾಗಿ ಹೇಳಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷರು ತಿರಂಗಾ ಯಾತ್ರೆ ಹೆಸರಿನಲ್ಲಿ ರಾಜಕೀಯ ವೇದಿಕೆಯಾಗಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಬಳಸಿಕೊಂಡಿರುವುದು ತಪ್ಪು. ಈ ಕುರಿತಂತೆ ವಿಶ್ವವಿದ್ಯಾನಿಲಯದ ಕೆಲವು ಸಿಂಡಿಕೇಟ್ ಸದಸ್ಯರು ಸರಕಾರಕ್ಕೆ ಪತ್ರ ಬರೆದಿದ್ದಾರೆ. ತಾನು ಕೂಡಾ ಇದನ್ನು ಸರಕಾರದ ಗಮನಕ್ಕೆ ತಂದಿದ್ದೇನೆ. ತಿರಂಗ ಯಾತ್ರೆಯ ಹೆಸರಿನಲ್ಲಿ ದೇಶದ ಜನರ ಕಣ್ಣಿಗೆ ಮಂಕುಬೂದಿ ಎರಚುವ ಕಾರ್ಯ ಮಾಡುತ್ತಿದ್ದಾರೆ ಎಂದವರು ಟೀಕಿಸಿದರು.