ಮಂಗಳೂರಿನಲ್ಲಿ ಒಳ್ಳೆಯ ಬೆಳವಣಿಗೆಯಲ್ಲ: ಗೃಹ ಸಚಿವ ಪರಮೇಶ್ವರ್
ರಮ್ಯಾಗೆ ಮೊಟ್ಟೆ ಎಸೆತ ಪ್ರಕರಣ
ಮಂಗಳೂರು, ಆ.26: ಮಾಜಿ ಸಂಸದೆ ರಮ್ಯಾ ಅವರು ಮಂಗಳೂರಿಗೆ ಬಂದಿದ್ದ ವೇಳೆ ಮೊಟ್ಟೆ ಎಸೆದು ಪ್ರತಿಭಟಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬೆಂಗಳೂರಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯುತ್ತಿರುವ ಮಂಗಳೂರಿನಲ್ಲಿ ಇಂತಹ ಘಟನೆಯ ನಡೆಯಬಾರದಿತ್ತು ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ನಗರದ ಸರ್ಕ್ಯೂಟ್ಹೌಸ್ನಲ್ಲಿ ಇಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂಗಳೂರು ನಗರ ಹೇಳಿಕೆಗೆ ಪ್ರತ್ಯೇಕ ವ್ಯಾಖ್ಯಾನದ ಅಗತ್ಯವಿಲ್ಲ. ಈ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.
ಪೊಲೀಸರ ಭಡ್ತಿ ಸೂಕ್ತ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ ಅವರು, 2005ರ ಎಸ್ಐ ಕೇಡರ್ನವರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಭಡ್ತಿಯನ್ನು ಉದ್ದೇಶಪೂರ್ವಕವಾಗಿ ಉಳಿಸಿಕೊಂಡಿಲ್ಲ ಎಂದು ಹೇಳಿದರು.
ಜನಾರ್ದನ ಪೂಜಾರಿಗೆ ಪಕ್ಷದ ಕಚೇರಿಯಲ್ಲಿ ನಿಷೇಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಪಕ್ಷದ ಹಿರಿಯ ನಾಯಕರು. ಅವರ ಬಗ್ಗೆ ತುಂಬಾ ಗೌರವವಿದೆ. ಕೆಲವೊಮ್ಮೆ ಅವರ ಹೇಳಿಕೆಗಳು ಕಠೋರವಾಗಿರುತ್ತವೆ. ನಮ್ಮಲ್ಲಿ ಹೈಕಮಾಂಡ್ ಸುಪ್ರೀಂ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಕುರಿತಂತೆ ಗುಂಡೂರಾವ್ ಹೇಳಿಕೆ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.