ವಿಕಾಸ್ ಕಾಲೇಜಿನಲ್ಲಿ ‘ಪಾಂಚ್ ಸೌ ಕಾ ಜೋಶ್’ ಸ್ಪರ್ಧೆ
ಮಂಗಳೂರು, ಆ.27: ಯಶಸ್ಸಿನ ಗುಟ್ಟೆಂದರೆ ಮನೆ, ಹಳ್ಳಿ, ರಾಜ್ಯ, ರಾಷ್ಟ್ರ, ಜಗತ್ತು ನಮ್ಮನ್ನು ಗುರುತಿಸುವಂತಾಗಬೇಕು. ಸತ್ತ ನಂತರವೂ ಇಡೀ ರಾಷ್ಟ್ರ ನೆನಪಿಸುವ ಹಾಗೆ ನಮ್ಮ ಬದುಕು ಇರಬೇಕು ಎಂದು ಮಂಗಳೂರಿನ ಪ್ರಸಿದ್ಧ ನ್ಯಾಯವಾದಿ ಪದ್ಮಪ್ರಸಾದ್ ಹೆಗ್ಡೆ ಹೇಳಿದ್ದಾರೆ.
ಅವರು ನಗರದ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ಪಾಂಚ್ ಸೌ ಕಾ ಜೋಶ್’ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಆಕಾಶವನ್ನು ಮುಟ್ಟುವ ಕನಸು ಕಾಣಬೇಕು, ನೆಪೋಲಿಯನ್ ಹೇಳುವ ಹಾಗೆ ನಾವು ಮುಂದೆ ಏನಾಗಬೇಕು, ಎನ್ನುವುದನ್ನು ಇವತ್ತು ಕನಸು ಕಾಣಬೇಕು. ಸಮಾಜವನ್ನು ನೀವು ಪ್ರೀತಿಸಿ, ಸಹಜವಾಗಿಯೇ ಸಮಾಜವು ನಿಮ್ಮನ್ನು ಪ್ರೀತಿಸುತ್ತದೆ. ಥಾಮಸ್ ಆಲ್ವಾ ಎಡಿಸನ್ ಕನಸು ಕಂಡ ಮತ್ತು ತಾಳ್ಮೆಯಿಂದ ಆ ಕನಸನ್ನು ಸಾಕಾರಗೊಳಿಸಿದ. ಎಲ್ಲರನ್ನು ಗೌರವಿಸಿ. ನಮ್ಮ ಬಗ್ಗೆ ಮಾತ್ರ ಯೋಚಿಸಬೇಡಿ, ಋಣಾತ್ಮಕ ಯೋಚನೆ ಬೇಡ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ವಿಕಾಸ್ ಎಜ್ಯೂ ಸೊಲ್ಯುಷನ್ನ ನಿರ್ದೇಶಕ ಡಾ. ಅನಂತ್ಪ್ರಭು ಜಿ., ಸಂಚಾಲಕ ಪ್ರೊ.ರಾಜಾರಾವ್ ಕೆ., ವಿಕಾಸ್ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಜೆ.ಕೆ ರಾವ್, ಉಪಪ್ರಾಂಶುಪಾಲೆ ಮೋಹನಾ ಆರ್. ಉಪಸ್ಥಿತರಿದ್ದರು.
ಅತ್ಯುತ್ತಮ ವ್ಯವಹಾರದ ವಿಭಾಗದಲ್ಲಿ ಶಾರದಾ ವಿದ್ಯಾನಿಕೇತನ ತಲಪಾಡಿಯ ಚಿರಂತ್ ಪಿ.ಟಿ. ಮತ್ತು ಅನ್ವಿತ್, ಅತ್ಯುತ್ತಮ ಶೋಧನಾ ಮಾದರಿಯಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ನ ರಾಹುಲ್ ಎಂ. ಮತ್ತು ಸೆಲ್ಲಾ ರೋಶನಿಶ್ರೀ, ಮೆಲಿಟಾ ಕರಿಸ್ಟಾ ವಾಲ್ಟರ್, ಸೌಂದರ್ಯಗುಣ ಗ್ರಾಹಕತೆಯುಳ್ಳ ಚುರುಕು ಮಾದರಿಯಲ್ಲಿ ಕೆನರಾ ಹೈಸ್ಕೂಲ್ ಉರ್ವದ ದಾಮೋದರ್ ಪ್ರಭು, ಚೈತ್ರಾ ಶೇಟ್, ಶಾರ್ವರಿ ನಾವಡ ತಲಾ 10,000 ರೂ. ಬಹುಮಾನ ಪಡೆದುಕೊಂಡರು. ತೀರ್ಪುಗಾರರ ವಿಶಿಷ್ಠ ಬಹುಮಾನ 5,000 ರೂ.ಗಳನ್ನು ಶಾರದಾ ವಿದ್ಯಾಲಯದ ಕಾರ್ತಿಕೇಯ, ರಜತ್ ರಾವ್, ಅನಘಾ ಪಡೆದುಕೊಂಡರು.
ಕಾರ್ಯಕ್ರಮ ಸಂಯೋಜಕಿ ಐಶ್ವರ್ಯಾ ಸ್ಪರ್ಧೆಯ ಬಗ್ಗೆ ವಿವರಿಸಿದರು. ಉಪನ್ಯಾಸಕಿ ದೀಪಿಕಾ ಶೆಟ್ಟಿ ಪರಿಚಯಿಸಿದರು. ಉಪನ್ಯಾಸಕಿ ಜೆಸಿಲ್ಲಾ ವಂದಿಸಿದರು. ವೀಣಾ ಗಂಗೊಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.