ಸುಬ್ರಹ್ಮಣ್ಯ: ಅಪರಿಚಿತ ಗಂಡಸಿನ ಶವ ಪತ್ತೆ
ಸುಬ್ರಹ್ಮಣ್ಯ, ಆ.27: ಇಲ್ಲಿನ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಅಪರಿಚಿತ ಗಂಡಸಿನ ಶವವೊಂದು ಶನಿವಾರದಂದು ಪತ್ತೆಯಾಗಿದೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆಯಲು ಕುಳಿತುಕೊಳ್ಳುವ ಬೆಂಚ್ನ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಮಧ್ಯಾಹ್ನ ಕಂಡುಬಂದಿದೆ. ಈ ಕುರಿತು ನಿಲ್ದಾಣದ ಮೇಲ್ವಿಚಾರಕರಿಗೆ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಮೇಲ್ವಿಚಾರಕರ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ ಶವ ಪರಿಶೀಲನೆ ನಡೆಸಿದ್ದಾರೆ. ಶವದ ಬಳಿ ಮೊಬೈಲ್ ದೊರಕಿದ್ದು ಅದರಲ್ಲಿರುವ ಸಂಪರ್ಕ ಸಂಖ್ಯೆ ಆಧಾರದ ಮೇಲೆ ಮೃತರ ಸಂಬಂಧಿಕರನ್ನು ಸಂಪರ್ಕಿಸುವ ಪ್ರಯತ್ನವನ್ನು ಪೊಲೀಸರು ನಡೆಸುತ್ತಿದ್ದಾರೆ. ಮೃತರು ತಮಿಳುನಾಡು ಮೂಲದ ತಿರ್ಚಿ ನಿವಾಸಿಯಾಗಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.ಕ್ಷೇತ್ರಕ್ಕೆ ಒಬ್ಬಂಟಿಯಾಗಿ ಬಂದಿದ್ದು ಅಸ್ವಸ್ಥತೆಗೆ ಒಳಗಾಗಿ ಅಥವಾ ಹೃದಯಾಘಾತದಿಂದ ಮೃತ ಪಟ್ಟಿರಬಹುದಾಗಿ ಅಂದಾಜಿಸಲಾಗಿದೆ.
ನಿಲ್ದಾಣದಲ್ಲಿ ಶವ ಕಂಡುಬಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತಾದರೂ, ಸ್ಥಳಕ್ಕೆ ಪೊಲೀಸರು ಬರಲು ಒಂದು ತಾಸುಗಳ ಅವಧಿ ಹಿಡಿಯಿತು. ತಕ್ಷಣ ಕಾರ್ಯ ಪ್ರವೃತ್ತರಾಗದ ಪೊಲೀಸರ ವಿರುದ್ಧ ಅಲ್ಲಿ ನೆರೆದಿದ್ದವರು ಅಸಮಾಧಾನ ತೋರ್ಪಡಿಸಿದ್ದಾರೆ. ಶವವನ್ನು ಸುಬ್ರಹ್ಮಣ್ಯ ಪಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.